Focus NewsImportant
Trending

ಗುಡ್ಡದಂಚಿನ ರೈಲ್ವೆ ಟನೆಲ್‌ ಪ್ರವೇಶ ದ್ವಾರದ ಬಳಿ ಯುವಕನೋರ್ವನ ಮೃತ ದೇಹ ಪತ್ತೆ: ರೈಲು ಬಡಿದು ದುರಂತ

ಗುಡ್ಡದಂಚಿನ ರೈಲ್ವೆ ಟನೆಲ್‌ ಪ್ರವೇಶ ದ್ವಾರದ ಬಳಿ ಯುವಕನೋರ್ವ ನ ಮೃತ ದೇಹ ಪತ್ತೆಯಾಗಿದ್ದು, ಸ್ಥಳೀಯ ಪೊಲೀಸರು ಹಾಗೂ ರೈಲ್ವೆ ಇಲಾಖೆಯವರು ಸ್ಥಳ ಪರಿಶೀಲಿಸಿದರು. ಅಂಕೋಲಾ ತಾಲೂಕಿನ ಹಾರವಾಡ ರೈಲ್ವೆ ಸ್ಟೇಶನ್ ಹತ್ತಿರ, ಅಂಕೋಲಾ ಕಡೆಯಿಂದ ಕಾರವಾರ ಹೋಗುವ ರೈಲ್ವೆ ಮಾರ್ಗದ ಗುಡ್ಡದಂಚಿನ ರೈಲ್ವೆ ಟನೆಲ್ ಪ್ರವೇಶ ದ್ವಾರದ ಬಳಿ ಯುವಕನೋರ್ವನ ಮೃತ ದೇಹ ಪತ್ತೆಯಾಗಿದೆ.

ಹಾರವಾಡದ ಒಕ್ಕಲಕೇರಿ ನಿವಾಸಿ ಮನೋಹರ ಗಣಪತಿ ಗೌಡ (36) ಮೃತ ದುರ್ದೈವಿಯಾಗಿದ್ದಾನೆ. ರೈಲು ಬಡಿದ ಪರಿಣಾಮ ಆತನ ಬೆನ್ನಿನ ಭಾಗಕ್ಕೆ ತೀವ್ರ ಪೆಟ್ಟು ಬಿದ್ದು, ಬಲಗೈ ಭುಜದ ಭಾಗ ಮುರಿತ,ದೇಹದ ಇತರೆ ಭಾಗಗಳಿಗೂ ಗಂಭೀರ ಪೆಟ್ಟು ಬಿದ್ದು ರಕ್ತ ಸ್ರಾವದೊಂದಿಗೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಕುಟುಂಬಸ್ಥರು ಶುಭಕಾರ್ಯವೊಂದಕ್ಕೆ ಹೋಗಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಕೃಷಿ – ಕೂಲಿ ಕೆಲಸಗಾರನಾಗಿದ್ದ ಈತನ ಸಾವಿಗೆ ಸಂಬಧಿಸಿದಂತೆ ನಿಖರ ಕಾರಣ ಮತ್ತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಅಂಕೋಲಾ ಪಿಎಸ್ಐ ಕುಮಾರ ಕಾಂಬಳೆ ಸ್ಥಳ ಪರಿಶೀಲಿಸಿದರು. ರೈಲ್ವೆ ಇಲಾಖೆ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದು ಕರ್ತವ್ಯ ನಿರ್ವಹಿಸಿದರು. ದುರ್ಗಮ ರಸ್ತೆಯಲ್ಲಿ ರಕ್ಷಕ ಅಂಬುಲೆನ್ಸ ವಾಹನದ ಮೂಲಕ ಮೃತದೇಹವನ್ನು ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ನಾಯ್ಕ, ಹಾಗೂ ಮೃತನ ಸಹೋದರ ರಮೇಶ ಗೌಡ, ಹಾಗೂ ಸ್ಥಳೀಯ ಗ್ರಾಪಂ ಸದಸ್ಯ ಸುಭಾಸ ಎಂ ನಾಯ್ಕ, : ಗ್ರಾಮಸ್ಥರಾದ ಕೃಷ್ಣಗೌಡ, ಸುಧಾಕರ ಗೌಡ, ಮತ್ತಿತರರು ಸಹಕರಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button