ಕರ್ನಾಟಕದ ಬಾರ್ಡೋಲಿಗೆ ಮೊದಲ ಭೇಟಿ ನೀಡಿದ ಜಿಲ್ಲಾಧಿಕಾರಿ | ಶಾಸಕ ಸೈಲ್, ಎ ಸಿ ಸೇರಿದಂತೆ ಇತರೆ ಅಧಿಕಾರಿಗಳ ಜತೆ ಚರ್ಚೆ
ಬಡವರ ಸಂಕಷ್ಟ ಆಲಿಸಿ : ಗೃಹಲಕ್ಷ್ಮೀ ನೊಂದಣಿ ಮಾಡಿ ಕೊಳ್ಳಿ ಎಂದ ಮಹಿಳಾ ಅಧಿಕಾರಿ
![](http://i0.wp.com/vismaya24x7.com/wp-content/uploads/2023/08/IMG-20230813-WA0031.jpg?fit=1600%2C715&ssl=1)
ಅಂಕೋಲಾ: ನೂತನ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅಂಕೋಲಾ ತಾಲೂಕಿಗೆ ತಮ್ಮ ಪ್ರಥಮ ಭೇಟಿ ನೀಡಿದ್ದು,,ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನ,ವಸ್ತುಸಂಗ್ರಹಾಲಯ, ಗ್ರಂಥಾಲಯ ಪರಿಶೀಲಿಸಿ ಈ ಹಿಂದೆ ಇಲ್ಲಿ ಆದ ಕಾಮಗಾರಿಗಳ ಲೋಪದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಮತ್ತು ವ್ಯವಸ್ಥೆ ಸುಧಾರಣೆಗೆ ಒತ್ತು ನೀಡುವುದಾಗಿ ತಿಳಿಸಿದರು.ನಂತರ ನೀಲಂಪುರದ ಅಂಬೇಡ್ಕರ್ ಕಾಲೋನಿ ಗೆ ತೆರಳಿ ಅಲ್ಲಿನ ನಿವಾಸಿಗಳ ಸಮಸ್ಯೆ ಆಲಿಸಿದರು.ಹೆದ್ದಾರಿ ಅಗಲೀಕರಣದಿಂದ ಮನೆ ಕಳೆದುಕೊಳ್ಳಲಿರುವ ಕುಟುಂಬಗಳ ಪರಿಹಾರ ವಿತರಣೆಯಲ್ಲಿ ಆಗಿರುವ ಕೆಲ ತೊಡಕುಗಳ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಭಧಿತ ಕಂದಾಯ ಇಲಾಖೆ, ತಾಲೂಕಾ ಪಂಚಾಯತ,ಭೂ ಮಾಪನಾ ಇಲಾಖೆಗೆ ಸೂಚಿಸಿದರು.
ಅಲ್ಲಿಂದ ವಂದಿಗೆ ಗಮ ಪಂಚಾಯತ ವ್ಯಾಪ್ತಿಯ ಹೊಸಗದ್ದೆ ಜನತಾ ಕಾಲನಿಗೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳ ಮನೆ ಪಟ್ಟಾ ಮಂಜೂರಿ ಮತ್ತಿತರ ಸಮಸ್ಯೆ ಆಲಿಸಿದರಲ್ಲದೇ , ಗೃಹಲಕ್ಷ್ಮೀ ಯೋಜನೆ ನೊಂದಣಿ ಮಾಡಿಸಿಕೊಳ್ಳುವಂತೆ ಮಹಿಳೆಯರಿಗೆ ತಿಳಿಸಿದರು. ಶಾಸಕ ಸತೀಶ್ ಸೈಲ್ ತಾಲೂಕಿನ ಹತ್ತಾರು ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು, ಸಮಸ್ಯೆ ಪರಿಹಾರಕ್ಕೆ ಕೋರಿಕೊಂಡರು.
ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ,ಅಂಕೋಲಾ ತಹಶೀಲ್ದಾರ ಅಶೋಕ ಭಟ್ಟ, ಇತರೆ ಕೆಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ತಾಲೂಕಿನ ವಿವಿಧ ಸ್ಥರದ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು,ಹಿರಿ-ಕಿರಿಯ ಮುಖಂಡರು,ಸಾರ್ವಜನಿಕ ಪ್ರಮುಖರು ಹಾಗೂ ಆಯಾ ಭಾಗದ ಸ್ಥಳೀಯರಿದ್ದರು.
ಕರ್ನಾಟಕದ ಬಾರ್ಡೋಲಿ ಎಂಬ ಖ್ಯಾತಿಯ ಅಂಕೋಲಾಕ್ಕೆ ಸ್ವಾತಂತ್ರ್ಯೋತ್ಸವ ದಿನಾಚರಣೆಗೂ ಪೂರ್ವ ನೂತನ ಜಿಲ್ಲಾಧಿಕಾರಿಗಳ ಭೇಟಿ ಹಲವರಲ್ಲಿ ಹೊಸ ಭರವಸೆ ಮೂಡಿಸಿದ್ದು,ತಮ್ಮ ಆಡಳಿತ ಅವಧಿಯಲ್ಲಿ ಈ ತಾಲೂಕಿನ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಬೇಕಿದೆ ಎಂಬ ಮಾತು ಪ್ರಜ್ಞಾವಂತ ವಲಯದಿಂದ ಕೇಳಿ ಬಂದಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ