Shri Kshethra Subrahmanya: ಪ್ರಸಿದ್ಧ ನಾಗ ಕ್ಷೇತ್ರ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಜನಸಾಗರ

ಹೊನ್ನಾವರ: ತಾಲೂಕಿನ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಾಲಯ, ( Shri Kshethra Subrahmanya) ನಾಗಾರಾಧನೆಗೆ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿದ್ದು, ನಾಗರ ಪಂಚಮಿ ನಿಮಿತ್ತ ಜಿಲ್ಲೆಯ ವಿವಿಧಡೆಯಿಂದ ಆಗಮಿಸಿದ ಸಾವಿರಾರು ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬೆಳಿಗ್ಗೆಯಿಂದ ರಾತ್ರಿ 8.30ರ ವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದೇವರಿಗೆ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸರ್ವಾಭರಣ ಸೇವೆ, ನಾಗ ಮಂತ್ರಾಭಿಷೇಕ, ರುದ್ರಾಭಿಷೇಕ ಇತ್ಯಾದಿ ಸೇವೆಗಳು ನಡೆದವು.

ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಾಲಯ ( Shri Kshethra Subrahmanya ) ಚರ್ಮ ರೋಗ, ಸಂತಾನ ಅಪೇಕ್ಷೆಗಳಿಗೆ ಪುಣ್ಯ ಸ್ಥಳವಾಗಿದೆ. ಸಣ್ಣಪುಟ್ಟ ಕಾಯಿಲೆಗಳು ಬಂದಲ್ಲಿ ಸುಬ್ರಹ್ಮಣ್ಯನಿಗೆ ಬಾಳೆಗೊನೆ ಪೂಜೆ ಸಮರ್ಪಣೆ ಮಾಡಿದ್ದಲ್ಲಿ ಭಕ್ತರ ಮನೋಬಿಷ್ಠೆಗಳು ಸಿದ್ಧಿಸುತ್ತವೆ ಎನ್ನುವುದು ಭಕ್ತರ ನಂಬಿಕೆ. ವಿವಿಧ ಜಿಲ್ಲೆ, ವಿವಿಧ ರಾಜ್ಯ ಹಾಗೂ ಸುತ್ತಮುತ್ತಲಿನ ಊರುಗಳ ಜನರೆಲ್ಲ ಇಲ್ಲಿಗೆ ಬಂದು ತಮ್ಮ ಸಂಕಷ್ಟಗಳನ್ನು ಪರಿಹರಿಸಿಕೊಳ್ಳುತ್ತಾರೆ.

ನಾಗಬನವು ಶ್ರೀ ಕ್ಷೇತ್ರಕ್ಕೆ ಹೋಗುವ ದ್ವಾರದಲ್ಲಿದ್ದು, ನಾಗರಪಂಚಮಿಯoದು ಅಲ್ಲಿಯು ವಿಶೇಷ ಪೂಜೆ, ಅಭಿಷೇಕ ಕಾರ್ಯ ಭಕ್ತರಿಂದ ನಡೆಯುತ್ತದೆ. ವಿಶೇಷವಾಗಿ ಭಕ್ತರು ಹರಕೆ ಹಾಗೂ ಭಕ್ತಿಪೂರ್ವಕವಾಗಿ ನಾಗಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸ್ಥಳವಾದ ‘ನಾಗಬನ’ವು ಇಲ್ಲಿ ಬಹಳ ಮಹತ್ವವನ್ನು ಪಡೆದುಕೊಂಡಿದೆ. ನಾಗರಪಂಚಮಿ ದಿನ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಹಾಲು ಎರೆಯುವ ಮೂಲಕ ತಮ್ಮ ಸೇವೆ ಸಲ್ಲಿಸುತ್ತಾರೆ.

ಆಡಳಿತ ಮಂಡಳಿ ಅಧ್ಯಕ್ಷ ಎಸ್.ಆರ್.ಹೆಗಡೆ ಮಾತನಾಡಿ ದಕ್ಷಿಣದ ನಾಸಿಕ ಎಂದು ಪ್ರಸಿದ್ದವಾದ ಮುಗ್ವಾ ಸುಬ್ರಹ್ಮಣ್ಯ ಸನ್ನಿದಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ನಾಗರಪಂಚಮಿ ನಿಮಿತ್ತ ಭಕ್ತರಿಗೆ ವಿವಿಧ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ನಾಗಮೂರ್ತಿ ಪ್ರತಿಷ್ಟಾಪನೆ ಮಾಡಿದವರು ಈ ದಿನ ಆಗಮಿಸಿ ಪೂಜೆ ಸಲ್ಲಿಸುವ ಸಂಪದ್ರಾಯ ಈ ಹಿಂದಿನಿoದಲೂ ನಡೆದುಬಂದಿದೆ ಎಂದರು.

Mugwa Subrahmanya Temple : ಪುರಾಣ ಪ್ರಸಿದ್ಧ ಮುಗ್ವಾ ಸುಬ್ರಹ್ಮಣ್ಯ ದೇವಾಲಯಕ್ಕೆ ಹರಿದುಬಂದ ಜನಸಾಗರ

ದೇವಾಲಯದ ಆಡಳಿತ ಮಂಡಳಿಯವರು ವಿವಿಧ ಸೇವಾ ಕೌಂಟರ್ ತೆರೆದು ಜನದಟ್ಟನೆ ಆಗದಂತೆ ಕ್ರಮ ವಹಿಸಿದ್ದರು. ಜಿಲ್ಲೆಯ ವಿವಿಧಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಪೊಲೀಸರು, ಸ್ವಯಂ ಸೇವಕರು ಜನದಟ್ಟನೆ ಹಾಗೂ ಟ್ರಾಫಿಕ್ ಸಮಸ್ಯೆ ಉಂಟಾಗದoತೆ ನೋಡಿಕೊಂಡರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version