Important
Trending

ರಾಜ್ಯದಲ್ಲಿಯೇ ಮೊದಲ ಪ್ರಯೋಗ : ಕಾಳಿ ನದಿಗೆ ಕಾಂಕ್ರೀಟ್ ತೇಲುವ ಜಟ್ಟಿ ನಿರ್ಮಾಣ

ಎಲ್ಲರ ಗಮನ ಸೆಳೆದಿದೆ ಈ ಯೋಜನೆ

ಕಾರವಾರ: ರಾಜ್ಯದಲ್ಲೇ ಮೊದಲ ಬಾರಿಗೆ ಕಾರವಾರದಲ್ಲಿ ತೇಲುವ ಕಾಂಕ್ರೀಟ್ ಜಟ್ಟಿ ನಿರ್ಮಾಣ ಮಾಡಲಾಗುತ್ತಿದೆ. ಗಾಳಿ, ಮಳೆ, ಅಲೆಗಳ ಅಬ್ಬರದ ನಡುವೆಯೂ ಈ ಜಟ್ಟಿ ಬಳಿ ಸುಲಭವಾಗಿ ಬೋಟ್ಗಳು ನಿಲ್ಲಲು ಸಾಧ್ಯವಾಗಿರುವುದುದರಿಂದ ಸದ್ಯ ಕರಾವಳಿಯಲ್ಲಿ ಬಂದರು ಇಲಾಖೆ ಈ ಪ್ರಯೋಗ ಎಲ್ಲರ ಗಮನ ಸೆಳೆದಿದೆ.ಹೌದು ರಾಜ್ಯದಲ್ಲಿಯೇ ಅತ್ಯಂತ ಉದ್ದದ ಕಡಲತೀರ ಪ್ರದೇಶವನ್ನು ಒಳಗೊಂಡಿರುವ ಉತ್ತರಕನ್ನಡ ಜಿಲ್ಲೆಯ ಕಡಲತೀರಗಳಲ್ಲಿ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತದೆ. ಅದರಲ್ಲಿಯೂ ಮೀನುಗಾರಿಕೆ, ಜಲಸಾಹಸಿ ಚಟುವಟಿಕೆ ಪ್ರದೇಶಗಳಲ್ಲಿ ಬೋಟ್ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿನ ಮೀನುಗಾರರು ಪ್ರವಾಸಿಗರು ಪರದಾಡುವ ಸ್ಥಿತಿ ಇದೆ. ಆದರೆ ಇದೀಗ ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ತೇಲುವ ಕಾಂಕ್ರಿಟ್ ಜಟ್ಟಿಯನ್ನು ಕರಾವಳಿ ತೀರಕ್ಕೆ ಪರಿಚಯಿಸಲಾಗಿದೆ.

ಕಾರವಾರ ತಾಲ್ಲೂಕಿನ ಸದಾಶಿವಗಡದ ಕಾಳಿನದಿ, ಅರಬ್ಬೀ ಸಮುದ್ರ ಸೇರುವ ಸಂಗಮ ಪ್ರದೇಶದಲ್ಲಿ ರಾಜ್ಯದಲ್ಲೇ ಮೊದಲ ತೇಲುವ ಕಾಂಕ್ರಿಟ್ ಜಟ್ಟಿಯನ್ನು ಬಂದರು ಇಲಾಖೆ ನಿರ್ಮಾಣ ಮಾಡಿದೆ. ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಯಡಿ 2.70 ಕೋಟಿ ವೆಚ್ಚದಲ್ಲಿ ಜಟ್ಟಿ ಸಿದ್ಧಗೊಂಡಿದ್ದು ಇನ್ನೇನು ಪೂರ್ಣಗೊಳ್ಳುವ ಹಂತದಲ್ಲಿದೆ. 12 ಮೀ ಉದ್ದ, 3 ಮೀ. ಅಗಲವಿರುವ ಈ ಕಾಂಕ್ರಿಟ್ ಜಟ್ಟಿಗೆ 20 ಮೀ ಉದ್ದದ ಅಲ್ಯೂಮೀನಿಯಂ ಸೇತುವೆ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. ಕ್ರೀಡಾ ಇಲಾಖೆಯ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ಸುಪರ್ದಿಯಲ್ಲಿರುವ ಪ್ರದೇಶದಲ್ಲಿ ಸದ್ಯ ತೇಲುವ ಜಟ್ಟಿ ನಿರ್ಮಾಣಗೊಂಡಿದ್ದು ಈ ಜಟ್ಟಿಯಿಂದ ಮುಂದಿನ ದಿನಗಳಲ್ಲಿ ಜಲಸಾಹಸ ಕ್ರೀಡೆಗಳ ತರಬೇತಿಗೆ ಅನುಕೂಲವಾಗಲಿದೆ.

ಗಾಳಿ, ಮಳೆಯ ಸಂದರ್ಭದಲ್ಲೂ ಜಟ್ಟಿಯಲ್ಲಿ ಬೋಟುಗಳ ನಿಲುಗಡೆ ಸಾಧ್ಯವಾಗಲಿದ್ದು ಪ್ರವಾಹ ವಿಕೋಪ ಸಂದರ್ಭಗಳಲ್ಲಿ ಸಹ ಸಾರ್ವಜನಿಕ ಬೋಟುಗಳ ನಿಲುಗಡೆಗೆ ಇದು ಸಹಕಾರಿಯಾಗಲಿದೆ. ಇನ್ನು ತೇಲುವ ಕಾಂಕ್ರೀಟ್ ಜಟ್ಟಿಯನ್ನ ರಾಜ್ಯ ಬಂದರು ಇಲಾಖೆ ಉತ್ತರಕನ್ನಡದ 4 ಹಾಗೂ ಉಡುಪಿ, ಮಂಗಳೂರು ಸೇರಿ ಒಟ್ಟು 10ಕ್ಕೂ ಹೆಚ್ಚು ಸ್ಥಳದಲ್ಲಿ ನಿರ್ಮಿಸಲು ಯೋಜನೆ ಹಾಕಿಕೊಂಡಿದೆ. ನದಿ ಹಾಗೂ ಸಮುದ್ರ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಬೋಟು ನಿಲುಗಡೆಗೆ ಈ ಮೊದಲು ಫೈಬರ್ ಮಾದರಿಯ ತೇಲುವ ಜಟ್ಟಿಗಳನ್ನ ಬಳಸಲಾಗುತ್ತಿತ್ತು.

ಆದರೆ ಸಮುದ್ರದಲ್ಲಿ ಹೆಚ್ಚು ಏರಿಳಿತವಿರುವಾಗ ಜಟ್ಟಿಯಲ್ಲಿ ಬೋಟು ನಿಲುಗಡೆಗೆ ಸಾಧ್ಯವಾಗುತ್ತಿರಲಿಲ್ಲ. ಈ ಜಟ್ಟಿ ಕಾಂಕ್ರಿಟ್‌ನಿAದ ಮಾಡಲ್ಪಟ್ಟಿದ್ದು, ತಳಭಾಗದಲ್ಲಿ ರಬ್ಬರ್ ಕೋಟಿಂಗ್ ಇದ್ದು ಮಳೆ, ಗಾಳಿಯಲ್ಲೂ ಜಟ್ಟಿ ಹೆಚ್ಚು ಸ್ಥಿರವಾಗಿರಲಿದೆ. ಈ ಜಟ್ಟಿಯಲ್ಲಿ ಬ್ಯಾಟರಿ ಚಾರ್ಜಿಂಗ್, ನ್ಯಾವಿಗೇಶನ್‌ನಂತಹ ವ್ಯವಸ್ಥೆಗಳಿದ್ದು ಬೋಟು ನಿಲುಗಡೆಗೆ ನೆರವಾಗಲಿದೆ. ಇನ್ನು ತೇಲುವ ಕಾಂಕ್ರಿಟ್ ಜಟ್ಟಿ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದಲೂ ಸಾಕಷ್ಟು ಅನುಕೂಲವಾಗಲಿದ್ದು ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಿ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಾರೇ ತೇಲುವ ಕಾಂಕ್ರಿಟ್ ಜಟ್ಟಿ ನಿರ್ಮಾಣದಿಂದ ಜಲಸಾಹಸ ಕ್ರೀಡಾ ತರಬೇತಿಗೆ ಅನುಕೂಲವಾಗುವುದರ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೂ ಸಹಕಾರಿಯಾಗಲಿದ್ದು ಬಂದರು ಇಲಾಖೆ ಆದಷ್ಟು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಬಳಕೆಗೆ ಒದಗಿಸಿಕೊಡಲಿ ಅನ್ನೋದೇ ನಮ್ಮ ಆಶಯ.

ವಿಸ್ಮಯ ನ್ಯೂಸ್, ಕಾರವಾರ

Back to top button