ಹೊನ್ನಾವರದ ಚಂದಾವರದಲ್ಲಿ “ಸಂಜೀವಿನಿ ಮಾರ್ಟ್” ಶುಭಾರಂಭ

ಹೊನ್ನಾವರ: ತಾಲೂಕಿನ ಚಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಜೀವಿನಿ ಒಕ್ಕೂಟಗಳ ಆಶ್ರಯದಲ್ಲಿ ಸ್ವ ಸಹಾಯ ಸಂಘಗಳ ಸದಸ್ಯರಿಂದ ಉತ್ಪಾದಿಸಲ್ಪಟ್ಟ ಉತ್ಪನ್ನಗಳ “ಸಂಜೀವಿನಿ ಮಾರ್ಟ್” ಮಳಿಗೆಯನ್ನು ಉದ್ಘಾಟನೆಯನ್ನು ಕುಮಟಾ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ರಿಬ್ಬನ್ ಕತ್ತರಿಸಿ ದೀಫ ಬೇಳಗಿಸುವುದರ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ ಸಂಜೀವಿನಿ ಒಕ್ಕೂಟದ ಮೂಲಕ ಮಹಿಳೆಯರ ಸ್ವಾವಲಂಬನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಶೇಷ ಒತ್ತು ನೀಡುತ್ತಿದೆ.

ಮಹಿಳೆಯರು ತಯಾರಿಸಿದ ವಿವಿಧ ವಸ್ತುಗಳನ್ನು ಒಂದಡೆ ಮಾರಾಟ ಮಾಡುವ ಉದ್ದೇಶದಿಂದ ಈ ಮಳಿಗೆ ಆರಂಭಿಸುತ್ತಿದ್ದು, ಮಹಿಳೆಯರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮದ ಅಭಿವೃದ್ದಿಗೆ ಗ್ರಾ.ಪಂ. ಪ್ರತಿನಿಧಿಗಳು ಒಂದಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಗ್ರಾಮದ ಅಭಿವೃದ್ದಿ ಆಗಲಿದೆ ಎಂದರು. ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಮಾತನಾಡಿ ತಾಲೂಕಿನಲ್ಲಿ ಎನ್.ಆರ್.ಎಂ.ಎಲ್ . ಯೋಜನೆಯ ಮೂಲಕ ಈ ಮಳಿಗೆ ಆರಂಭಿಸಿದ್ದು, ನರೇಗಾ ಯೋಜನೆಯ ಮೂಲಕ ಮುಂದಿನ ದಿನದಲ್ಲಿ ನಾಲ್ಕು ಮಳಿಗೆ ಪ್ರಾರಂಭಿಸಲಾಗುವುದು.

ಸಂಜೀವಿನಿ ಒಕ್ಕೂಟದ ತಾಲೂಕ ಅಧ್ಯಕ್ಷ ಸರೋಜಾ ಶೆಟ್ಟಿ ಮಾತನಾಡಿ ಈ ಹಿಂದೆ ಸಂತೆ ಮಾಡಿದಾಗ ಒಂದು ದಿನ ಮಾತ್ರ ವ್ಯಾಪಾರ ನಡೆಯುತ್ತಿತ್ತು. ಆದರೆ ಇದೀಗ ಖಾಯಂ ಮಳಿಗೆಯಿಂದ ಪ್ರತಿನಿತ್ಯ ಉತ್ಪನ್ನಗಳು ದೊರಯಲಿದೆ. ಮಹಿಳೆಯರು ಕೂಡಾ ತಾವು ಉತ್ಪಾದಿಸಿದ ವಸ್ತುಗಳನ್ನು ಇಲ್ಲಿ ತಂದು ಮಾರಾಟ ಮಾಡಬಹದು . ಇದರಿಂದ ಎಲ್ಲರಿಗೂ ಅನೂಕೂಲವಾಗಲಿದೆ. ಮುಂದಿನ ದಿನದಲ್ಲಿ ತಾಲೂಕ ಕೇಂದ್ರದಲ್ಲಿಯೂ ಈ ಮಳಿಗೆ ಕಾರ್ಯರಂಭವಾಗಲಿದೆ ಎಂದರು.

ವಿವಿಧ ಬಗೆಯ ತಿಂಡಿತಿನಿಸುಗಳು, ಗೃಹಬಳಕೆಯ ವಸ್ತುಗಳು, ಬಟ್ಟೆಗಳು, ಕರಕುಶಲ ವಸ್ತುಗಳು ಮಳಿಗೆಯಲ್ಲಿ ಮಾರಾಟಕ್ಕೆ ಇಡಲಾಗಿದ್ದು, ಶಾಸಕರು ವಿವಿಧ ವಸ್ತುಗಳನ್ನು ಇದೇ ವೇಳೆ ಖರೀದಿಸಿದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ

Exit mobile version