ಭೀಕರ ಅಪಘಾತ: ಆಸ್ಪತ್ರೆಯಿಂದ ಸಹೋದರನ ಆರೋಗ್ಯ ವಿಚಾರಿಸಿ ಮನೆಗೆ ಮರಳುತ್ತಿದ್ದ ಬೈಕ್ ಸವಾರ ಸಾವು

ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕಿಗೆ ಕಾರು ಡಿಕ್ಕಿ ಪಡಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟ ದುರ್ಘಟನೆ ಕಾರವಾರ ವ್ಯಾಪ್ತಿಯ ಬಿಣಗಾ ಕರಿದೇವಸ್ಥಾನದ ಬಳಿ ಸಂಭವಿಸಿದೆ. ಅಂಕೋಲಾ ತಾಲೂಕಿನ ಅಗಸೂರು ಹೊನ್ನಳ್ಳಿ ನಿವಾಸಿ ಪ್ರವೀಣ ಕೇಶವ ಗೌಡ (25) ಮೃತ ದುರ್ದೈವಿಯಾಗಿದ್ದಾನೆ.

ಈತ ಅಕ್ಟೋಬರ್ 6 ರ ರಾತ್ರಿ ವೇಳೆ ಕಾರವಾರದಿಂದ ಅಂಕೋಲಾ ಕಡೆ ಬೈಕ್ ಮೇಲೆ ಬರುತ್ತಿದ್ದ ಸಂದರ್ಭದಲ್ಲಿ, ಎದುರು ಗಡೆ ( ಅಂಕೋಲಾ ಕಡೆಯಿಂದ ಕಾರವಾರ ಕಡೆ ) ಸಾಗುತ್ತಿದ್ದ ಕಾರಿನ ಚಾಲಕ , ಅತಿ ವೇಗ ಮತ್ತು ಅಜಾಗರೂಕತೆಯಿಂದ ಕಾರು ಚಲಾಯಿಸಿ ರಸ್ತೆಯ ವಿರುದ್ಧ ದಿಕ್ಕಿಗೆ ಬಂದು ಬೈಕಿಗೆ ಮುಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಬೈಕ್ ಸವಾರ ಹೆದ್ದಾರಿಯಲ್ಲಿ ಸಿಡಿದು ಬಿದ್ದು, ಅಪಘಾತದಲ್ಲಿ ತಲೆಯ ಹಿಂಬದಿಗೆ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಪ್ರವೀಣ ಕೇಶವ ಗೌಡ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.

ಈ ಕುರಿತು ಅಂಕೋಲಾದ ಸ್ಥಳೀಯ ಪ್ರಮುಖ ಅನಂದು ಗೌಡ ಪೊಲೀಸ್ ದೂರು ನೀಡಿದ್ದು, ಕಾರವಾರ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿತ ಕಾರು ಚಾಲಕ ಗೋವಾ ನಾವೆಲಿಂ ನಿವಾಸಿ ಶೇಖ್ ಮೌಲಾ ಅಲಿ ಶೇಖ್ ಅಬ್ದುಲ್ ಎನ್ನುವವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಮುಂದುವರಿಸಿದ್ದಾರೆ.

ತನ್ನ ಕುಟುಂಬ ಸಹೋದರನೊಬ್ಬ ಅನಾರೋಗ್ಯದಿಂದ ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಪಟ್ಟಿದ್ದು, ಆಸ್ಪತ್ರೆಗೆ ಹೋಗಿ ಆತನ ಆರೋಗ್ಯ ವಿಚಾರಿಸಿ ಮನೆಗೆ ಮರಳುತ್ತಿದ್ದ ಪ್ರವೀಣ ಗೌಡ ದಾರಿ ಮಧ್ಯೆ ನಡೆದ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುವಂತಾಗಿರುವುದು ದುರ್ವಿಧಿಯೇ ಸರಿ.ಕೂಲಿ ಕೆಲಸ ಮಾಡಿ ಮನೆಗೆ ಆಸರೆಯಾಗ ಬೇಕಿದ್ದ ಮಗನನ್ನು ಕಳೆದು ಕೊಂಡ ಬಡ ಕುಟುಂಬ ಪುತ್ರ ಶೋಕದಲ್ಲಿ ಕೊರಗುವಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version