Focus News
Trending

ಕಾಂಗ್ರೆಸ್ ಪಕ್ಷದಿಂಧ ಪಂಚ ರಾಜ್ಯದ ಚುನಾವಣೆಗೆ ಹಣದ ಸಂಗ್ರಹ: ಮಾಜಿ ಶಾಸಕ ಸುನೀಲ್ ನಾಯ್ಕ ಆರೋಪ

ಭಟ್ಕಳ: ಕಾಂಗ್ರೆಸ್ ಪಕ್ಷವು ಪಂಚ ರಾಜ್ಯದ ಚುನಾವಣೆಗೆ ಹಣದ ಸಂಗ್ರಹಕ್ಕೆ ಜನರ ಹಾಗೂ ರಾಜ್ಯದ ಹಣ ದುರ್ಬಳಕೆ ಮಾಡುತ್ತಿದೆ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಗುಡುಗಿದರು. ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜ್ಯ ಸರ್ಕಾರದ ಕೃತ್ಯವನ್ನು ಸಿ.ಬಿ.ಐ ತನಿಖೆ ನಡೆಸಬೇಕೆಂದು ಆಗ್ರಹಿಸಿ ಭಟ್ಕಳದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜ್ಯ ಸರ್ಕಾರವನ್ನು ವಜಾಗೊಳಿಸಲು ಶಿಫಾರಸ್ಸು ಮಾಡುವ ಕುರಿತು ಮತ್ತು ಈ ಬಗ್ಗೆ ಸಿ.ಬಿ.ಐ ತನಿಖೆ ನಡೆಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಭಟ್ಕಳ ಬಿಜೆಪಿ ಮಂಡಲವು ಸಹಾಯಕ ಕಮೀಷನರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ಬೆಂಗಳೂರಿನಲ್ಲಿ ಅಂಬಿಕಾಪತಿ ಎಂಬ ಗುತ್ತಿಗೆದಾರನ ಮನೆಯಲ್ಲಿ 42 ಕೋಟಿ ರೂ. ನಗದು ಹಣ, ಮತ್ತು ಬಿಲ್ಡರ್ ಸಂತೋಷ ಎನ್ನುವವರ ಮನೆಯಲ್ಲಿ ಸುಮಾರು 40 ಕೋಟಿ ರೂ. ಹಣ ಐ.ಟಿ. ದಾಳಿಯಲ್ಲಿ ಸಿಕ್ಕಿದ್ದು, ಈ ಹ ಕಮಿಷನ್ ರೂಪದಲ್ಲಿ ಬಂದಿರುವ ಹಣವಾಗಿದೆ ಎನ್ನುವುದು ದಟ್ಟವಾದ ಸುದ್ದಿಯಾಗಿದೆ.

ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದ ಬಾಕಿ ಹಣ ರೂ. 650 ಕೋಟಿಗೆ ಪ್ರತಿಯಾಗಿ ಗುತ್ತಿಗೆದಾರರು ನೀಡಿದ ಕಮಿಷನ ಮೊತ್ತ ರೂ. 82 ಕೋಟಿ ಎಂಬುದು ರಾಜ್ಯದಲ್ಲಿ ಸಂಚಲನ ಮೂಡಿಸುವದರೊಂದಿಗೆ ಸರಕಾರ ಹಣೆಬರಹ ಜನರಿಗೆ ಅರ್ಥವಾಗುತ್ತಿದೆ. ಇದಲ್ಲದೇ ಇನ್ನೂ ಸಾವಿರಾರು ರೂಪಾಯಿ ಕೋಟಿ ಹಣ ಸಂಗ್ರಹ ಮಾಡಿ ಪಂಚ ರಾಜ್ಯ ಚುನಾವಣೆಯ ತಯಾರಿಗೆ ಕಾಂಗ್ರೆಸ್ ತನ್ನ ಖರ್ಚಿಗೆ ಕಲೆಕ್ಷನ್ ಮಾಡಲಾಗುತ್ತಿದೆ ಎಂಬುವ ವಿಷಯ ಕೂಡಾ ಭಾರಿ ಚರ್ಚೆಯಲ್ಲಿದೆ. ಕರ್ನಾಟಕ ರಾಜ್ಯವು ಕಾಂಗ್ರೆಸ ಪಾಲಿಗೆ ಎ.ಟಿ.ಎಮ್. ಆಗಿದೆ ಹಾಗೂ ಹಣ ಸಂಗ್ರಹದ ಕೇಂದ್ರವಾಗಿದೆ.

ರಾಜ್ಯದ ಬರಕ್ಕೆ ತುತ್ತಾಗಿರುವ ರೈತರಿಗೆ ಪರಿಹಾರ ನೀಡಿಲ್ಲ. ವಿದ್ಯುತ್ ಕಡಿತ ವಿಪರೀತವಾಗಿದೆ. ವರ್ಗಾವಣೆ ದಂಧೆ ನಡೆಯುತ್ತಿದೆ. ತುಷ್ಟಿಕರಣದಲ್ಲಿ ಸರ್ಕಾರ ಮುಳುಗಿದೆ. ರಾಜ್ಯ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಅಕ್ರಮ ಹಣ ಸಿಕ್ಕಿರುವ ಬಗ್ಗೆ ಹಣದ ಮೂಲವನ್ನು ತಿಳಿಯಲು ಸಿ.ಬಿ.ಐ. ತನಿಖೆ ಅವಶ್ಯಕವಾಗಿದೆ. ಆದ್ದರಿಂದ ಭಾರಿ ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಲು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಬೇಕು ಮತ್ತು ಈ ಬಗ್ಗೆ ಸಿ.ಬಿ.ಐ ತನಿಖೆ ಮಾಡಬೇಕೆಂದು ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಶಾಸಕ ಸುನೀಲ ನಾಯ್ಕ ‘ ರಾಜ್ಯ ಕಾಂಗ್ರೆಸ ಸರಕಾರದ ನಿಜವಾದ ಕರ್ಮ ಕಾಂಡದ ಬಗ್ಗೆ ಜನರಿಗೆ ಅರಿವಾಗಬೇಕಾಗಿದೆ. ಕಾಂಗ್ರೆಸನ ಮಾಜಿ ಕಾರ್ಪೋರೆಟರ ಹಾಗೂ ಬಿಲ್ಡರ್ ಮತ್ತು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತನ ಮನೆಯಲ್ಲಿ ಒಟ್ಟು ೮೨ ಕೋಟಿ ಸಿಕ್ಕಿರುವುದು ಸರಕಾರದ ಭ್ರಷ್ಟತೆ ಮತ್ತು ಇದೊಂದು ರಾಜ್ಯದ ದುರಂತವಾಗಿದೆ. ಜನರ ಹಣವನ್ನು ಸಂಪೂರ್ಣವಾಗಿ ಕೊಳ್ಳೆ ಹೊಡೆಯುತ್ತಿದ್ದಾರೆ. ರಾಜ್ಯ ಇಂತಹ ಬರಗಾಲದ ಸಂದರ್ಭದಲ್ಲಿದ್ದರು ಸಹ ಒಂದು ರೂಪಾಯಿ ಹಣ ಬಿಡುಗಡೆ ಮಾಡದೇ ಇರುವುದು ಜನರ ದೌರ್ಬಾಗ್ಯವೇ ಸರಿ.

ಪಂಚ ರಾಜ್ಯದ ಚುನಾವಣೆಗೆ ಹಣದ ಸಂಗ್ರಹಕ್ಕೆ ಜನರ ಹಾಗೂ ರಾಜ್ಯದ ಹಣ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಗುಡುಗಿದ ಅವರು ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಹಣದ ಕೊರತೆಯ ನಡುವೆಯು ನೆರೆ ಪೀಡಿತ ಪ್ರದೇಶದಲ್ಲಿ ಕುಟುಂಬದ ಹಣದ ನೆರವು ಕೇವಲ ೨೪ ಗಂಟೆ ಮಾಡಿದ್ದೇವೆ ಎಂದು ಅವರು ಗ್ಯಾರೆಂಟಿ ಘೋಷಣೆಯ ಯೋಜನೆ ರಾಜ್ಯದಲ್ಲಿ ಅಪರಿಪೂರ್ಣವಾಗಿದೆ. ಯೋಜನೆಯು ರಾಜ್ಯದ ಜನರಿಗೆ ತಲುಪಿಸಲು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಒಂದು ಲಕ್ಷ ಅನುದಾನ ಬಿಡುಗಡೆ ಮಾಡಿಲ್ಲ. ಒಂದು ಕಾಮಗಾರಿಯ ಗುದ್ದಲಿ ಪೂಜೆ ನಡೆದಿಲ್ಲ. ಸಂತ್ರಸ್ತರಿಗೆ ಕುಡಿಯುವ ನೀರು ತಲುಪಿಸಲು ಆಗಿಲ್ಲ. ಮುಖ್ಯಮಂತ್ರಿ ಪರಿಹಾರ ನಿಧಿಯ ಹಣವನ್ನು ವಿತರಿಸಲಾಗಿಲ್ಲ. ಆದರೆ ಈಗಿನ ಜಿಲ್ಲಾ ಉಸ್ತುವಾರಿ ಸಚಿವರು ತಾವಿರುವ ಕಚೇರಿಯ ಕಟ್ಟಡವನ್ನು ನವೀಕರಣ ಮಾಡುವುದಕ್ಕೆ ಕೋಟಿ ಗಟ್ಟಲೇ ಹಣ ವ್ಯಯ ಮಾಡಿದ್ದಾರೆ.

ಹೊನ್ನಾವರ ಕಚೇರಿಗೆ 2.5 ಕೋಟಿ ಭಟ್ಕಳದ ಕಚೇರಿಗೆ 3 ಕೋಟಿ ಒಟ್ಟು 5 ಕೋಟಿ ಅನವಶ್ಯಕವಾಗಿ ಖರ್ಚು ಮಾಡಿದ್ದಾರೆ. ನಾನು ಸಹ 5 ವರ್ಷ ಶಾಸಕನಾಗಿದ್ದು ರೂ.3500 ಕುರ್ಚಿ ಮತ್ತು ರೂ. 5 ಸಾವಿರದ ಟೇಬಲನಲ್ಲಿಯೆ ಕ್ಷೇತ್ರದ ಜನರಿಗೆ ಸರಕಾರದಿಂದ ಸಿಗಬೇಕಾದ ಅನುದಾನಕ್ಕೆ ಪೂರಕ ಕೆಲಸ ಮಾಡಿದ್ದೇನೆ. ನನಗು ಗೊತ್ತಿದೆ ಸರಕಾರದಿಂದ ಕಚೇರಿ ವಿನ್ಯಾಸಕ್ಕೆ ಕೋಟಿ ಹಣ ಸಿಗಲಿದೆ ಎಂದು ಆದರೆ ಜನರ ಹಣ ಪೋಲಾಗಬಾರದು ಎಂಬ ಉದ್ದೇಶದಿಂದ ಅಂತಹ ಕೆಲಸ ನಾನು ಮಾಡಿಲ್ಲ ಎಂದು ಕಿಡಿಕಾರಿದರು.

ಇದಕ್ಕೂ ಪೂರ್ವದಲ್ಲಿ ಪ್ರವಾಸಿ ಮಂದಿರದಿoದ ಬಿಜೆಪಿ ಮಂಡಲದ ಪ್ರಮುಖರು, ಕಾರ್ಯಕರ್ತರು ತಾಲ್ಲೂಕು ಆಡಳಿತ ಸೌಧದ ತನಕ ಕಾಂಗ್ರೆಸ ಸರಕಾರದ ವೈಫಲ್ಯದ ವಿರುದ್ದ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು. ನಂತರ ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ಗ್ರೇಡ್-೨ ತಹಸೀಲ್ದಾರ ಸಂತೋಷ ಭಂಡಾರಿ ಮನವಿಯನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಭಾಸ್ಕರ ದೈಮನೆ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶಿವಾನಿ ಶಾಂತಾರಾಮ, ಶ್ರೀನಿವಾಸ ನಾಯ್ಕ, ಈಶ್ವರ ನಾಯ್ಕ ದೊಡ್ಮನೆ, ಕೇಶವ ನಾಯ್ಕ ಮುಂತಾದ ಬಿಜೆಪಿ ಕಾರ್ಯಕರ್ತರು ಇದ್ದರು.

ವಿಸ್ಮಯ ನ್ಯುಸ್, ಉದಯ ಎಸ್ ನಾಯ್ಕ, ಭಟ್ಕಳ

Back to top button