ನೇತ್ರದಾನಕ್ಕೆ ನೊಂದಾಯಿಸಿಕೊಂಡ ‘ಶೌರ್ಯ’ ತಂಡದ ಸದಸ್ಯರು

ಕುಮಟಾ: ಹೊನ್ನಾವರ ತಾ.ಹಳದೀಪುರ “ಶೌರ್ಯ”ತಂಡದ ಸೇವಾ ಕಾರ್ಯಕರ್ತರು ಕುಮಟಾದಲ್ಲಿನ ‘ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆ’ಗೆ ಭೇಟಿ ನೀಡಿ ಸ್ವಯಂ ಸ್ಪೂರ್ತಿಯಿಂದ ‘ನೇತ್ರದಾನ’ಕ್ಕೆ ಅಧಿಕೃತವಾಗಿ ನೊಂದಾಯಿಸಿಕೊಂಡು ಸಂಸ್ಥೆಯಿಂದ “ಅಭಿನಂದನಾ ಪತ್ರ” ಪಡೆದರು. ಹಳದೀಪುರ ‘ಶೌರ್ಯ’ ತಂಡದ ಸದಸ್ಯರಾದ ಪ್ರಶಾಂತ ನಾಯ್ಕ,ಜಯಂತಿ ನಾಯ್ಕ, ಚೇತನಾ ನಾಯ್ಕ,ರಕ್ಷಾ ಗೌಡ,ಪ್ರಶಾಂತ ಗೌಡ,ರೂಪಾ ನಾಯ್ಕ,ಸುಬ್ರಮಣ್ಯ ಗೌಡ,ಪ್ರದೀಪ ಗೌಡ,ಅನಂತ ಗೌಡ ಪಾಲ್ಗೊಂಡರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ರಾಜ್ಯದಾದ್ಯಂತ ಇರುವ ಒಂದು ನೂರಕ್ಕೂ ಹೆಚ್ಚು “ಶೌರ್ಯ” ‘ಶ್ರೀ ಧರ್ಮಸ್ಥಳ ವಿಪತ್ತು ಸೇವಾ ತಂಡ’ ಗಳಲ್ಲಿನ ಇಪ್ಪತ್ತು ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಸೂಕ್ತ ತರಬೇತಿ ಪಡೆದು ವಿಪತ್ತು ಸೇವಾ ಮತ್ತು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಯಾವುದೇ ಫಲಾಪೇಕ್ಷೆಗಳಿಲ್ಲದೇ ತಮ್ಮನ್ನು ತೊಡಗಿಸಿಕೊಂಡಿದ್ದು, ಇವರ ಮಾನವೀಯ ಸೇವಾ ಕಾರ್ಯಗಳು ಅನುಕರಣೀಯ ಹಾಗೂ ಅಭಿನಂದನಾರ್ಹ ಎಂದು ಅಭಿಪ್ರಾಯಿಸಿದ ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ಹಾಗೂ ಆಸ್ಪತ್ರೆಯ ಇತರ ಸಹೋದ್ಯೋಗಿಗಳು, ಈ ಸೇವಾ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿ ಶುಭ ಕೋರಿದರು.

ವಿಸ್ಮಯ ನ್ಯೂಸ್, ಕುಮಟಾ

Exit mobile version