Focus News
Trending

ಮಂದಿರದ ಉದ್ಘಾಟನಾ ಅಮಂತ್ರಣ ಮತ್ತು ಅಕ್ಷತೆ ವಿತರಿಸುವ ಸಿದ್ಧತೆಯಲ್ಲಿದ್ದವರ ಮೇಲೆ ಹಲ್ಲೆ

ಅಂಕೋಲಾ: ರಾಮ ಮಂದಿರದ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಮತ್ತು ಅಕ್ಷತೆಯನ್ನು ವಿತರಿಸಲು ಸಿದ್ಧತೆ ನಡೆಸುತ್ತಿದ್ದವರ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ತಾಲೂಕಿನ ಹಿಲ್ಲೂರು ತಿಂಗಳೆಬೈಲ್ ನಲ್ಲಿ ನಡೆದಿದೆ. ಹಿಲ್ಲೂರು ತಿಂಗಳೆಬೈಲ್ ನಿವಾಸಿ ದತ್ತಾತ್ರೇಯ ಗಣಪತಿ ಹೆಗಡೆ (35) ಹಿಲ್ಲೂರು ನಿವಾಸಿಗಳಾದ ಸಚಿತ ಗೋವಿಂದರಾಯ ನಾಯಕ (44) ನಾಗರಾಜ ಗಣಪತಿ ಹೆಗಡೆ (43) ಎನ್ನುವವರ ಮೇಲೆ ಹಲ್ಲೆ ನಡೆಸಲಾಗಿದ್ದು ತಿಂಗಳೆಬೈಲ್ ನಿವಾಸಿ ಪ್ರದೀಪ ಮಾಣೇಶ್ವರ ನಾಯಕ (35) ಎಂಬಾತ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ.

ಆರೋಪಿತ ಪ್ರದೀಪ ನಾಯಕ ಮೊದಲಿನಿಂದಲೂ ತಿಂಗಳೆಬೈಲ್ ಗ್ರಾಮದ ರಾಮಲಿಂಗೇಶ್ವರ ದೇವಾಲಯಕ್ಕೆ ಪೂಜೆಗೆ ಬರುವವರಿಗೆ ಅವಾಚ್ಯ ಶಬ್ದಗಳಿಂದ ಬೈದು ವಿನಾಕಾರಣ ಜಗಳ ಮಾಡಿ ತೊಂದರೆ ಕೊಡುತ್ತಿದ್ದ ಎನ್ನಲಾಗುತ್ತಿದ್ದು ರಾಮಲಿಂಗೇಶ್ವರ ದೇವಾಲಯದ ಕಮೀಟಿ ಸದಸ್ಯರು ಮತ್ತು ಊರ ನಾಗರಿಕರು ಸೇರಿ ದೇವಾಲಯದ ಹೊರ ಆವರಣದಲ್ಲಿ ಅಯೋಧ್ಯೆಯ ಶ್ರೀ ರಾಮ ಮಂದಿರದ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಮತ್ತು ಅಕ್ಷತೆಯನ್ನು ವಿತರಿಸುವ ಕಾರ್ಯಕ್ರಮದ ಸಿದ್ಧತೆಗಳನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ ಪ್ರವೇಶಿಸಿ ದತ್ತಾತ್ರೇಯ ಗಣಪತಿ ಹೆಗಡೆ ಅವರನ್ನು ಕರೆದು ಯಾರನ್ನು ಕೇಳಿ ದೇವಾಲಯದ ಆವರಣದಲ್ಲಿ ಪ್ರವೇಶ ಮಾಡಿದ್ದೀರಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಟ್ಟೆಯ ಮೇಲೆ ಬಲವಾಗಿ ಹೊಡೆದಿದ್ದು ತಪ್ಪಿಸಲು ಬಂದ ದೇವಾಲಯದ ಸಮಿತಿ ಸದಸ್ಯ ಸಚೀತ ನಾಯಕ ಅವರಿಗೆ ತಲೆಯ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ ಅಲ್ಲದೇ ಕತ್ತಿಯನ್ನು ತಂದು ದತ್ತಾತ್ರೇಯ ಹೆಗಡೆ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದು ತಡೆಯಲು ಹೋದ ನಾಗರಾಜ ಹೆಗಡೆ ಅವರ ಬಲ ಕಣ್ಣಿಗೆ ಕತ್ತಿಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಲ್ಲದೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ತಿಳಿದು ಬಂದಿದೆ.

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪಿ.ಎಸ್. ಐ ಉದ್ದಪ್ಪ ಧರೆಪ್ಪನವರ್ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಮುಂದುವರಿಸಿದ್ದಾರೆ.ಗ್ರಾಮೀಣ ಪ್ರದೇಶದ ಅದೂ ಸಹ ದೇವಸ್ಥಾನದ ಆವರಣದಲ್ಲಿ,ದೈವ ಕಾರ್ಯಕ್ಕೆ ಸಂಬಂಧಿಸಿದ ಸೇವೆಯಲ್ಲಿ ನಿರತರಾಗ ಬಯಸಿದವರಿಗೆ ತಿಳಿಗೇಡಿ ಮಾಡಿದ ಹಲ್ಲೆ ಸ್ಥಳೀಯ ಹಲವರ ಬೇಸರಕ್ಕೆ ಕಾರಣವಾದಂತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button