ರೈಲ್ವೆ ಮೇಲ್ಸೆತುವೆ ಹತ್ತಿರದ ಹಳ್ಳದ ಬಳಿ ವ್ಯಕ್ತಿಯ ಮೃತದೇಹ ಪತ್ತೆ: ಸಂಕ್ರಾಂತಿ ದಿನದಂದೇ ದುರ್ಮರಣ ಹೊಂದಿದ ಯುವಕ ?

ಅಂಕೋಲಾ: ರೈಲ್ವೆ ಮೇಲ್ಸೆತುವೆ ಹತ್ತಿರದ ಹಳ್ಳದ ಬಳಿ ಯುವಕನೋರ್ವನ ಮೃತದೇಹ ಪತ್ತೆಯಾದ ಘಟನೆ, ರವಿವಾರ ಬೆಳಿಗ್ಗೆ ಬಾಳೇಗುಳಿ ಬಳಿ ಸಂಭವಿಸಿದೆ. ಕಾಕರಮಠ ನಿವಾಸಿ ಲಕ್ಷಣ ಬೀರಾ ಆಗೇರ (32) ಮೃತ ದುರ್ದೈವಿ ಯುವಕನಾಗಿದ್ದಾನೆ. ಸಣ್ಣ ಪುಟ್ಟ ಕೂಲಿ ಕೆಲಸ ಮಾಡಿಕೊಂಡಿರುತ್ತಿದ್ದ ಆತ ಪಟ್ಟಣದ ಚಿತ್ರಮಂದಿರದ ಎದುರಿನ ಕೆಲ ಸಣ್ಣಪುಟ್ಟ ಅಂಗಡಿ ಹಾಗೂ ಸುತ್ತಮುತ್ತಲಿನ ಹಲವು ಮನೆಗಳಿಗೆ ನೀರು,ತರಕಾರಿ ಮತ್ತಿತರ ಸಾಮಾನು ತರಲು ನೆರವಾಗುತ್ತಿದ್ದು ಹಲವರ ಪ್ರೀತಿ ವಿಶ್ವಾಸ ಗಳಿಸಿದ್ದ.

ಬೆಳಿಗಿನ ಜಾವ ಮನೆಯಿಂದ ಹೊರಟು ನಂತರ ಅದಾವುದೋ ಕಾರಣದಿಂದ ಬಾಳೇಗುಳಿ ಹಳ್ಳದ ಹತ್ತಿರ ರೈಲ್ವೆ ಮೇಲ್ಸೆತುವೆ ಬಳಿ ಹೋದವ, ತನ್ನ ಸಂಬಂಧಿಯೋರ್ವರಿಗೆ ಬೆಳಿಗ್ಗೆ 9-50 ರ ನಂತರ ಫೋನ್ ರಿಂಗಣಿಸಿದ್ದ ಎನ್ನಲಾಗಿದೆ. ಅದಾದ ಬಳಿಕ ಟ್ರೇನ್ ಬರುತ್ತಿರುವದನ್ನು ಗಮನಿಸಿ ಇಲ್ಲವೇ ಇತರೆ ಕಾರಣಗಳಿಂದ ಗಾಬರಿಗೊಂಡು, ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರಬಹುದು ಎಂದು ಸ್ಥಳೀಯರು ಮಾತನಾಡಿಕೊಂಡಂತಿದೆ.

ಮೇಲಿನಿಂದ ಬಿದ್ದಿರಬಹುದಾದ ಕಾರಣಕ್ಕೆ ತಲೆ ಭಾಗಕ್ಕೆ ತೀವೃ ಪೆಟ್ಟು ಬಿದ್ದು ಸಾವನಪ್ಪಿರುವ ಸಾಧ್ಯತೆ ಕೇಳಿ ಬಂದಿದೆ. ಸರಾಯಿ ಕುಡಿತದ ಚಟವೂ ಇದ್ದ ಈತ ಕೆಲವೊಮ್ಮೆ ಸ್ವಲ್ಪ ಪ್ರಮಾಣದ ಮಾನಸಿಕ ಖಿನ್ನತೆಗೂ ಒಳಗಾಗುತ್ತಿದ್ದ ಎನ್ನಲಾಗಿದ್ದು ಬಾಳೇಗುಳಿ ಬಳಿ ನಡೆದ ದುರ್ಘಟನೆ ಮತ್ತು ಯುವಕನ ಸಾವಿನ ಕುರಿತಂತೆ ಪೊಲೀಸ್ ರಿಂದ ಹೆಚ್ಚಿನ ಮತ್ತು ನಿಖರ ಕಾರಣಗಳು ತಿಳಿದು ಬರಬೇಕಾಗಿದೆ. ಪಿ ಎಸ್ ಐ ಉದ್ದಪ್ಪ ಮತ್ತು ಸಿಬ್ಬಂದಿಗಳು ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಮುಂದುವರಿಸಿದ್ದಾರೆ.

ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಕನಸಿಗದ್ದೆಯ ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ನಾಯ್ಕ ,ಮೃತನ ಸಂಬಂಧಿಗಳು, ಸ್ಥಳೀಯರು,ಸಹಕರಿಸಿದರು.ಪುರಸಭೆ ಸ್ಥಳೀಯ ವಾರ್ಡ್ ಸದಸ್ಯ ಮಂಜುನಾಥ್ ನಾಯ್ಕ, ಸಾಮಾಜಿಕ ಕಾರ್ಯಕರ್ತ ವಿಜಯ್ ಪಿಳ್ಳೆ,ಪುರಲಕ್ಕಿ ಬೇಣದ ಊರ ಬುಧವಂತ ಬಾಲಚಂದ್ರ ಬೀರ ಆಗೇರ,ಪ್ರಮುಖರಾದ ಪ್ರಭಾಕರ್ ರಾಮ ಅಗೇರ ಮತ್ತಿತರರು ಸಂಕ್ರಾಂತಿ ದಿನಂದಂದೇ ಲಕ್ಷ್ಮಣ ಆಗೇರ ಅಕಾಲಿಕ ನಿಧನರಾಗಿರುವುದಕ್ಕೆ ಬೇಸರ ವ್ಯಕ್ತ ಪಡಿಸಿ ,ಸಂತಾಪ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version