ಬೆಳಗಿನ ಜಾವ ಹೃದಯಾಘಾತದಿಂದ ರಂಗಭೂಮಿ ಮೇಕಪ್ ಆರ್ಟಿಸ್ಟ್ ನಿಧನ

ಕುಮಟಾ: ರಂಗಭೂಮಿಯ ಮೇಕಪ್ ಆರ್ಟಿಸ್ಟ್ ಕಲಾವಿದ ನಾಗರಾಜ್ ಭಂಡಾರಿ ಬೆಳಗ್ಗಿನ ಜಾವ 5:00 ಗಂಟೆಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಕುಮಟಾ ತಾಲೂಕಿನ ಹೆಗಡೆ ನಿವಾಸಿಯಾದ ಇವರು “ಚೈತ್ರಾ ವಸ್ತ್ರಲಂಕಾರ ಹೆಗಡೆ” ಎಂಬ ಮೇಕಪ್ ಸೆಟ್ ಮಾಲಕರಾಗಿ ರಂಗಭೂಮಿ ನಾಟಕಗಳಲ್ಲಿ ಅಮೋಘ ಸೇವೆ ಸಲ್ಲಿಸುತ್ತಾ ಜನಪ್ರಿಯತೆ ಗಳಿಸಿದ್ದರು.

ನಾಟಕ ರಂಗದಲ್ಲಿ ಮೇಕಪ್ ಆರ್ಟಿಸ್ಟ್ ಕಲಾವಿದರಾಗಿ, ಸರಿ ಸುಮಾರು ಮೂರು ದಶಕಗಳಿಂದ ಉತ್ತರ ಕನ್ನಡ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಲ್ಲಿ ತಮ್ಮದೇ ಆದ ಆತ್ಮೀಯ ಬಳಗ ಹೊಂದಿದ್ದರು. ಮೇಕಪ್ ಮತ್ತು ವಸ್ತ್ರಲಂಕಾರದಲ್ಲಿ ಉತ್ತಮ ಪ್ರಾವೀಣ್ಯತೆ ಹೊಂದಿದ್ದ ನಾಗರಾಜ್ ಭಂಡಾರಿ, ನಾಟಕದ ಸೀಜನ್ ನಲ್ಲಿ ಸದಾ ದುಡಿಮೆಯಲ್ಲಿ ನಿರತರಾಗಿರುತಿದ್ದರು.

ಗಣೇಶೋತ್ಸವದ ಸಂದರ್ಭದಲ್ಲಿ ಗಣೇಶನ ಮೂರ್ತಿ ತಯಾರಿಸುವ ಕಾಯಕದಲ್ಲೂ ನಿರತರಾಗಿರುತಿದ್ದರು. ಇಂದು ಬೆಳಿಗ್ಗಿನ ಜಾವ ಐದು ಗಂಟೆಗೆ ಹೃದಯಘಾತದಿಂದ ನಿಧನರಾದ ಇವರು ಪತ್ನಿ ಹಾಗೂ ಒಬ್ಬಳು ಮಗಳನ್ನು ಅಗಲಿದ್ದಾರೆ. ಸರಳ ಸಜ್ಜನಿಕೆಯ ಜನಾನುರಾಗಿ ಆಗಿದ್ದ ನಾಗರಾಜ್ ಭಂಡಾರಿ ನಿಧನಕ್ಕೆ, ಶ್ರೀ ಬೇಟೆವೀರ ಲಕ್ಷ್ಮೀ ವೆಂಕಟೇಶ ನಾಟ್ಯಕಲಾ ಸಂಘದ ನಿತ್ಯಾನಂದ ಭಟ್ ಹೊನ್ನಾವರ, ಚಿತ್ರನಟ ಜಿ.ಡಿ ಹೆರಂಭಾ, ರಂಗಭೂಮಿ ಕಲಾವಿದರಾದ ರವಿ ಹೆಗ್ಡೆ ವಂದೂರು, ನರಸಿಂಹ ನಾಯ್ಕ್ ಹರಡಸೆ ಸೇರಿದಂತೆ ಅನೇಕ ಕಲಾವಿದರು, ಕಲಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Exit mobile version