Important
Trending

ಬಸ್ ನಲ್ಲಿ ಬುರ್ಖಾ ಧರಿಸಿ ಕಳ್ಳತನ ಪ್ರಕರಣ: ಶಂಕಿತ ಮಹಿಳೆಯರನ್ನು ಬಂಧಿಸಿದ ಪೊಲೀಸರು

ಕುಮಟಾ: ಬುರ್ಖಾ ಧರಿಸಿದ ಇಬ್ಬರು ಮಹಿಳೆಯರು ಬಸ್‌ನಲ್ಲಿ ಪ್ರಯಾಣ ಬೆಳೆಸಿ ಇನ್ನಿತರ ಪ್ರಯಾಣಿಕರ ಆಭರಣ ಅಪಹರಿಸುವ, ಪಿಕ್ ಪಾಕೇಟ್ ಕೆಲಸವನ್ನು ಮಾಡುತ್ತಿದ್ದ ಬಗ್ಗೆ ದೂರು ದಾಖಲಾದ ಬೆನ್ನಲ್ಲೆ ಪೋಲೀಸ್ ಇಲಾಖೆ ಈ ಬಗ್ಗೆ ಮಾಹಿತಿ ಸಂಗ್ರಹಿಸಿ, ಇವರು ಸಂಚರಿಸುವ ವಿಡಿಯೋವನ್ನು ಸಿಸಿಟಿವಿಯಿಂದ ಸಂಗ್ರಹಿಸಲಾಗಿತ್ತು. ಈಗಾಗಲೇ ಕುಮಟಾದಲ್ಲಿ 2, ಹೊನ್ನಾವರ 1, ಭಟ್ಕಳ ಹಾಗೂ ಬ್ರಹ್ಮಾವರದಲ್ಲಿ ತಲಾ ಒಂದೊoದು ಪ್ರಕರಣ ವರದಿಯಾಗಿತ್ತು. ಸಿ.ಸಿ.ಟಿವಿ ವಿಡಿಯೋವನ್ನು ಆಧರಿಸಿ ಪೊಲೀಸರು ಶೋಧ ಕಾರ್ಯವನ್ನು ಪ್ರಾರಂಭಿಸಿದ್ದರು.

ಇದೀಗ ಶಂಕಿತ ಮಹಿಳೆಯರನ್ನು ಕುಮಟಾ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಇಬ್ಬರು ಬುರ್ಕಾಧಾರಿ ಹೆಂಗಸರು ಸೀಟು ಬಿಟ್ಟುಕೊಟ್ಟ ನೆಪವೊಡ್ಡಿ ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯ ಸರ ಕಳುವು ಮಾಡಿರುವ ಪ್ರಕರಣಕ್ಕೆ ಸಂಬoಧಿಸಿದoತೆ ಇಬ್ಬರು ಶಂಕಿತ ಮಹಿಳೆಯರನ್ನು ವಶಕ್ಕೆ ಪಡೆದ ಕುಮಟಾ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹೊಲನಗದ್ದೆ ಗ್ರಾ.ಪಂ ವ್ಯಾಪ್ತಿಯ ಕಡ್ಲೆ ಗ್ರಾಮದ ವಿಮಲಾ ವಿಷ್ಣು ನಾಯ್ಕ ಅವರು ಕೆಲ ದಿನಗಳ ಹಿಂದೆ ಮಾಂಗಲ್ಯ ಸರ ಕಳೆದುಕೊಂಡು ವಂಚನೆಗೆ ಒಳಗಾಗಿದ್ದರು. ಇದರ ಬೆನ್ನಲ್ಲೇ ಇನ್ನೂ ಒಬ್ಬರ ಮಾಂಗಲ್ಯ ಸರ ಇದೇ ಪ್ರಕರಣದಂತೆ ಕಳುವು ಮಾಡಿದ್ದರು. ಇವರು ಹೊನ್ನಾವರದಿಂದ ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಪ್ರಯಾಣಿಸಿಕೊಂಡು ಕುಮಟಾಕ್ಕೆ ಬರುತ್ತಿರುವಾಗ ಈ ಘಟನೆ ನಡೆದಿತ್ತು. ಈ ಕುರಿತು ವಿಮಲಾ ಅವರು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಚುರುಕುಗೊಳಿಸಿದ ಪೊಲೀಸರು ಕುಮಟಾ ಬಸ್ ನಿಲ್ದಾಣ ಸೇರಿ ಹಲವೆಡೆ ಹದ್ದಿನ ಕಣ್ಣಿಟ್ಟಿದ್ದರು.

ಈ ವೇಳೆ ಕುಮಟಾ ಬಸ್ ನಿಲ್ದಾಣದಲ್ಲಿ ಈ ಇಬ್ಬರು ಮಹಿಳೆಯರ ಚಲನವಲನ ಗಮನಿಸಿದ ಪೊಲೀಸರು ವಶಕ್ಕೆ ಪಡೆದು ಬಂಧಿಸಿ, ವಿಚಾರಣೆಗೊಳಪಡಿಸಿದ್ದರು. ಈ ಇಬ್ಬರು ಬುರ್ಕಾಧಾರಿಗಳ ಮೇಲೆ ಕುಮಟಾ ಪೊಲೀಸ್ ಠಾಣೆಯ ಪ್ರಕರಣವಲ್ಲದೇ ಹೊನ್ನಾವರ ಪೊಲೀಸ ಠಾಣೆ, ಮತ್ತು ಭಟ್ಕಳ ಶಹರ ಪೊಲೀಸ ಠಾಣೆಯಲ್ಲಿಯೂ ಕೂಡ ಅಪರಾಧ ಕೃತ್ಯವೆಸಗಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.

ಅಲ್ಲದೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮುಖಾಂತರ ಆಪಾದಿತೆಯರ ಫಿಂಗರ್ ಪ್ರಿಂಟ್ ಪಡೆದುಕೊಂಡಿದ್ದರಲ್ಲಿ ಮೊದಲ ಆರೋಪಿ ತಮಿಳುನಾಡು ಕೋಯಿಮತ್ತೂರಿನವರಾದ ಸಂದ್ಯಾ ಸಂಜಯ (40), ರಾಸಾತಿ ಮುರುಗೆ (24) ಇವರ ಮೇಲೆ ಹಾಸನ ಬಡಾವಣೆ ಪೊಲೀಸ ಠಾಣೆ, ಮಂಗಳೂರು ದಕ್ಷಿಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿದ್ದು, ಎರಡೂ ಪ್ರಕರಣಗಳು ವಿಚಾರಣೆಯಲ್ಲಿ ಬಾಕಿ ಇರುವುದು ಕಂಡುಬoದಿದೆ. ಈ ಇಬ್ಬರೂ ಆಪಾದಿತೆಯರಿಗೆ ನ್ಯಾಯಾಲಯಕ್ಕೆ ಹಾಜರಪಡಿಸಿ, ಜಿಲ್ಲಾ ಕಾರಾಗೃಹ ಕಾರವಾರದ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ.

Back to top button