ಗೋಕರ್ಣಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ: ಮಹಾಗಣಪತಿ ಮತ್ತು ಮಹಾಬಲೇಶ್ವರನ ದರ್ಶನ: ಸಕಲ ವಿಘ್ನ ನಿವಾರಣೆಗೆ ಪ್ರಾರ್ಥನೆ

ಗೋಕರ್ಣ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪಕ್ಷದ ಕಾರ್ಯಕರ್ತರ ಸಭೆ ಮತ್ತು ದೇಗುಲ ದರ್ಶನ ಮಾಡುತ್ತಿರುವ ರಾಜ್ಯದ ಉಪ ಮುಖ್ಯಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರು ಗೋಕರ್ಣ ಮಹಾಗಣಪತಿ ಮತ್ತು ಮಹಾಬಲೇಶ್ವರನ ದರ್ಶನ ಪಡೆದರು.

ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಕೊಲ್ಲೂರು ದರ್ಶನದ ಬಳಿಕ ಮಾರ್ಚ್ 26 ರ ರಾತ್ರಿ ಗೋಕರ್ಣಕ್ಕೆ ಬಂದು ವಾಸ್ತವ್ಯ ಮಾಡಿದ್ದ ,ರಾಜ್ಯದ ಉಪಮುಖ್ಯಮಂತ್ರಿಗಳು ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಆದ,ಡಿ ಕೆ ಶಿವಕುಮಾರ ಅವರು, ಮಾರ್ಚ್ 27 ರ ಬೆಳಿಗ್ಗೆ ಗೋಕರ್ಣ ಮಹಾಗಣಪತಿಯ ಸನ್ನಿಧಾನಕ್ಕೆ ತೆರಳಿ,ಅಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅವರು ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ, ಶ್ರೀ ಮಹಾಬಲೇಶ್ವರನ ದರ್ಶನ ಪಡೆದರು.ಶ್ರೀ ದೇವರ ಆತ್ಮಲಿಂಗಕ್ಕೆ ಜಲಾಭಿಷೇಕ ಸಲ್ಲಿಸಿ ಪತ್ರೆ ಸಮರ್ಪಿಸಿದರು.

ಬಳಿಕ ನಾಗಾಭರಣನಿಗೆ ಪುಷ್ಪ, ಗಂಧ,ಫಲ ಸಮರ್ಪಿಸಿ ಆರತಿ ಸೇವೆ ಮತ್ತು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.ದೇಗುಲ ಆಡಳಿತ ಮಂಡಳಿ ಪರವಾಗಿ ಡಿಕೆಶಿ ಅವರಿಗೆ ಶಾಲು ಹೊದಿಸಿ,ಮಹಾಬಲೇಶ್ವರನ ಪೋಟೋ ನೀಡಿ,ರುದ್ರಾಕ್ಷಿ ಹಾರ ಕೊರಳಿಗೆ ತೊಡಿಸಿ ಗೌರವ ಆಶೀರ್ವಾದ ನೀಡಲಾಯಿತು.ಪ್ರಧಾನ ಅರ್ಚಕರು ಡಿಕೆ ಶಿವಕುಮಾರ್ ಅವರಿಗೆ ಆಯುರ್ ಆರೋಗ್ಯ ಸಕಲ ಸೌಭಾಗ್ಯ,ಉನ್ನತ ಸ್ಥಾನಮಾನ ದಯ ಪಾಲಿಸಲಿ ಮತ್ತು ನಾಡಿನಲ್ಲಿ ಮಳೆ ಬೆಳೆ ಸಮೃದ್ಧಿಯಾಗಲಿ , ಸುಭಿಕ್ಷ ಆಡಳಿತ ನೆಲಸಲಿ ಎಂದು ಪ್ರಾರ್ಥಿಸಿದರು.

ಬಳಿಕ ಡಿಕೆಶಿ ಅವರು ಮಾಧ್ಯಮದವರ ಕೆಲ ಪ್ರಶ್ನೆಗೆ ಉತ್ತರಿಸಿದರು, ನಂತರ ಗೋಕರ್ಣದ ಶಕ್ತಿ ದೇವತೆ, ಸದ್ಭಕ್ತರ ಮಹಾತಾಯಿ ಭದ್ರಕಾಳಿ ದೇವಿ ದರ್ಶನ ಪಡೆದುಕೊಂಡರು. ಜಿಲ್ಲಾ ಉಸ್ತುವಾರಿ ಮಂತ್ರಿ ಮಂಕಾಳ ವೈದ್ಯ, ಶಾಸಕ ಸತೀಶ್ ಸೈಲ್,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ ಆಳ್ವ ,ಕಾಂಗ್ರೆಸ್ ಪಕ್ಷದ ಸ್ಥಳೀಯ ಹಾಗೂ ಇತರ ಹಿರಿ-ಕಿರಿಯ ಮುಖಂಡರು,ಕಾರ್ಯಕರ್ತರು,ಡಿಕೆಶಿ ಅಭಿಮಾನಿಗಳಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version