ಕರೆಯನ್ನಾದರಿಸಿ ಜೋಡಿ ಕೊಲೆ ರಹಸ್ಯ ಪತ್ತೆ ಹಚ್ಚಲು ಹೋದ ಪೊಲೀಸರಿಗೆ ಶಾಕ್! ಇದೊಂದು ವಿಚಿತ್ರ ಕ್ರೈಂ ಸ್ಟೋರಿ

ಅಂಕೋಲಾ : ವ್ಯಕ್ತಿಯೋರ್ವರು 112 ತುರ್ತು ಸಹಾಯವಾಣಿಗೆ ಇಲ್ಲೊಂದು ಜೋಡಿ ಕೊಲೆ ನಡೆದಿದೆ ಕೂಡಲೇ ಬನ್ನಿ ಎಂದು ಮಾಡಿದ ಕರೆಯನ್ನಾಧರಿಸಿ, ಸರ್ರನೆ ತಮ್ಮ ಜೀಪನ್ನೇರಿ,ಅರಣ್ಯ ಪ್ರದೇಶದ ಹಾದಿಯಲ್ಲಿ ಸಾಗಿ ಬಂದು, ತಮಗೆ ಕರೆ ಮಾಡಿದಾತ ಇರುವ ಸ್ಥಳಕ್ಕೆ ಬಂದು ನಿಂತ ಪೊಲೀಸರೇ ಶಾಕ್ ನಿಂದ ಬೆಚ್ಚಿಬೀಳುವಂತಾದ ವಿಚಿತ್ರ ಕ್ರೈಮ್ ಸ್ಟೋರಿ ಇದು. ಹುಸಿ ಕರೆಯಿಂದ ಹೀಗೂ ಆಗಬಹುದು ಎಂಬ ವಿಚಿತ್ರ ಸತ್ಯ ಹಿಲ್ಲೂರಿನಲ್ಲಿ ನಡೆದ ಈ ಘಟನೆಯಿಂದ ಸಾಬೀತಾಗಿದೆ.

ಸ್ಥಳೀಯ ನಿವಾಸಿ ಓರ್ವ ತನ್ನ ಮಗಳು ಮತ್ತು ಹೆಂಡತಿಯನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು 112 ತುರ್ತು ಸಹಾಯವಾಣಿಗೆ ಕರೆ ಮಾಡಿದ್ದ. ಆತನ ಕರೆಯನ್ನಾಧರಿಸಿ ಕೂಡಲೇ ಸ್ಥಳಕ್ಕೆ ಬಂದ ಪೋಲಿಸರು, ಅಲ್ಲಿ ಇಲ್ಲಿ ಹುಡುಕಾಟ ನಡೆಸಿ ಯಾವುದೇ ಮೃತದೇಹವಾಗಲಿ, ಕೊಲೆಯ ಕುರುಹಾಗಲಿ ಕಂಡು ಬರದೇ ಹತ್ತಿರದಲ್ಲಿಯೇ ಇದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಆತ ಇಲ್ಲಿ ಯಾವುದೇ ಕೊಲೆಯಾಗಿಲ್ಲ, ನಾನೇ ಸುಳ್ಳು ಕಥೆ ಕಟ್ಟಿ ನೀವು ಇಲ್ಲಿ ಬರುವಂತೆ ಮಾಡಿರುವೆ ಎಂದು, ಅಸಲಿ ಸತ್ಯ ಬಾಯಿಬಿಟ್ಟಿದ್ದಾನೆ.

ಆತನ ಮಾತು ವಿಚಿತ್ರ ವರ್ತನೆಗೆ ಈಗ ಪೊಲೀಸರೇ ಬೇಸ್ತುಬಿದ್ದಿದ್ದಾರೆ. ಸಾಂಸಾರಿಕ ಜಂಜಾಟ, ಇಲ್ಲವೇ ಮಾನಸಿಕ ಖಿನ್ನತೆ ಮತ್ತಿತರ ಕಾರಣಗಳಿಂದ ವ್ಯಕ್ತಿಯೋರ್ವ ಮಾಡಿದ ಹುಸಿಕರೆ, ಅನವಶ್ಯವಾಗಿ ಪೊಲೀಸರು ಸ್ಥಳಕ್ಕೆ ಬರುವಂತಾದರೆ, ಅಕ್ಕ ಪಕ್ಕದ ನಿವಾಸಿಗಳಲ್ಲೂ ಕೆಲ ಕಾಲ ಭಯ ಮತ್ತು ಆತಂಕಕ್ಕೆ ಕಾರಣವಾಗಿತ್ತು. ಮಂಜುನಾಥ ಬಿ ನಾಯಕ ಎಂಬ, ಈತ ನೀಡುವ ಕಿರುಕಳ, ಇಲ್ಲವೇ ಈತನ ವಿಚಿತ್ರ ವರ್ತನೆಗೆ ಬೇಸತ್ತೇ, ಈತನ ಮಡದಿ ಮತ್ತು ಮಗಳು ಈತನಿಂದ ದೂರವಿದ್ದು ಬೇರೆ ಕಡೆ ಆಶ್ರಯ ಪಡೆದಿದ್ದರು ಎನ್ನಲಾಗಿದೆ. ತನ್ನ ಕುಚೋದ್ಯ ಇಲ್ಲವೇ ಇರಬಹುದಾದ ಮಾನಸಿಕ ಖಿನ್ನತೆಯಿಂದ ಊರಿನ ಕೆಲವರ ನೆಮ್ಮದಿಗೂ ಭಂಗ ತರುವ ಈ ಆಸಾಮಿ, ಸುಳ್ಳು ಕಥೆ ಕಟ್ಟಿ, ಬಾಯಿ ಮಾತಲ್ಲೇ ತನ್ನ ಮಗಳು ಮತ್ತು ಹೆಂಡತಿಯನ್ನು ಕೊಂದವನನ್ನು ಆ ಮಂಜುನಾಥ ಸ್ವಾಮಿಯೇ ಕಾಪಾಡಬೇಕಿದೆ ಎಂದು ಕೆಲ ಸ್ಥಳೀಯರು ಮಾತನಾಡಿಕೊಂಡ ತಿತ್ತು ಎನ್ನಲಾಗಿದೆ.

ಒಟ್ಟಿನಲ್ಲಿ ಹುಸಿ ಕರೆ ಮೂಲಕ ಜೋಡಿ ಕೊಲೆ ಎಂಬ ಈ ವಿಚಿತ್ರ ಕ್ರೈಂ ಸ್ಟೋರಿ ಮಾಡಿದ ಖಳ ನಾಯಕನಿಗೆ,ಊರವರು ಇಲ್ಲವೇ ಆತನ ಕುಟುಂಬಸ್ಥರು ವೈದ್ಯಕೀಯ ಚಿಕಿತ್ಸೆ ಒಳಪಡಿಸಿ, ಮಾನಸಿಕ ಸ್ಥಿತಿ ಸುಧಾರಣೆಗೆ ಮುಂದಾಗುವಂತೆ ಪೊಲೀಸರು ಬುದ್ಧಿವಾದ ರೂಪದ ಸೂಚನೆ ನೀಡಿ ಬಂದಿದ್ದಾರೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version