ಅಡುಗೆ ಭಟ್ಟರ ವೇಷದಲ್ಲಿ ಬಂದು ಲೋಕಾಯುಕ್ತ ಅಧಿಕಾರಿಗಳ ದಾಳಿ: ಸ್ಥಳದಲ್ಲಿ ನಡೆಯಿತು ಹೈಡ್ರಾಮಾ?

ಹೊನ್ನಾವರ: ಅಡುಗೆ ಭಟ್ಟರ ವೇಷದಲ್ಲಿ ಬಂದು ದಾಳಿ ನಡೆಸಿದ ಲೋಕಾಯುಕ್ತ ಸಿಬ್ಬಂದಿಗಳು, ಹೊನ್ನಾವರ ಪಟ್ಟಣ ಪಂಚಾಯತ್‌ನ ಲಂಚಾವತಾರವನ್ನು ಬಯಲಿಗೆ ಎಳೆದಿದ್ದರು. ಇಲ್ಲಿನ ಪ.ಪಂ ಮುಖ್ಯಾಧಿಕಾರಿ ಪ್ರವೀಣ್ ಕುಮಾರ ನಾಯಕ ಹಾಗೂ ಪ.ಪಂ ಚುನಾಯತ ಸದಸ್ಯ ವಿಜಯ ವೇಂಕಟೇಶ ಕಾಮತ್ ಇಬ್ಬರನ್ನು ಬಂಧಿಸಿ, ತಡರಾತ್ರಿ ಕರೆದುಕೊಂಡು ಹೋಗುವಾಗ ಹೈಡ್ರಾಮಾ ನಡೆದಿದೆ. ಲಂಚಾವತಾರದಿoದ ಬೇಸತ್ತಿದ್ದ ಸಾರ್ವಜನಿಕರು ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿ, ಕರೆದುಕೊಂಡು ಹೋಗುವಾಗ ಹಲ್ಲೆಗೂ ಮುಂದಾದ ಘಟನೆ ನಡೆದಿದೆ.

ಈ ವೇಳೆ ಪೊಲೀಸ್ ಬಂದೋಬಸ್ತ್ ನಲ್ಲಿ ಕಾರಿನೊಳಗೆ ಕರೆತಂದು, ಅಲ್ಲಿಂದ ಕರೆದೊಯ್ದಿದ್ದಾರೆ. ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಹಲವು ದೂರುಗಳ ಸಹಿತವಾಗಿ ಕಛೇರಿಗೆ ಮುತ್ತಿಗೆ ಹಾಕಿದ್ದರು. ಅವುಗಳಲ್ಲಿ ಇಸ್ವತ್ತು ಹಗರಣಗಳು, ಜನನ ಮರಣ ನೊಂದಣಿ ಪ್ರಕರಣಗಳು, ಕಟ್ಟಡ ಅನುಮತಿ, ವಾಯುವಿಹಾರ ದೋಣಿಗಳಿಗೆ ಅನುಮತಿ ನೀಡಿದ ಪ್ರಕರಣಗಳು, ಮರಳು ದೋಣಿಗಳಿಗೆ ಮರಳು ದಾಸ್ತಾನು ಮಾಡಲು ಅನುಮತಿ ನೀಡುವ ಪ್ರಕರಣಗಳು, ಹೀಗೆ ಹಲವು ಪ್ರಕರಣಗಳಿದ್ದವು.

ಲೋಕಾಯುಕ್ತರ ಬಳಿ ತಮಗಾದ ಅನ್ಯಾಯದ ಕುರಿತು ಮಾಹಿತಿ ನೀಡಿ ಅಧಿಕಾರಿಗಳ ವಿರುದ್ದ ಆರೋಪಗಳ ಸುರಿಮಳೆಗೈದರು. ದಾಖಲೆ ಮತ್ತು ದೂರಿನೊಂದಿಗೆ ಸಂಪರ್ಕಿಸಲು ಲೋಕಾಯುಕ್ತ ಅಧಿಕಾರಿಗಳು ಸೂಚನೆ ನೀಡಿದರು. ಹೊನ್ನಾವರ ಪ.ಪಂ ಮುಖ್ಯಾಧಿಕಾರಿಯ ವಿರುದ್ಧ ಹಲವು ದೂರುಗಳು ಬರುತ್ತಿದ್ದವು ಆದರೆ ಖಚಿತ ದಾಖಲೆಗಳು ಇರಲಿಲ್ಲ. ಇದೀಗ ಲೋಕಾಯುಕ್ತ ಸಿಬ್ಬಂದಿಗಳ ಕಾರ್ಯಾಚರಣೆಯಿಂದಾಗಿ ಒಂದೊoದೇ ಭ್ರಷ್ಟಾಚಾರಗಳು ಹೊರಬರುತ್ತಿವೆ.

ವಿವೇಕ್ ಶೇಟ್, ವಿಸ್ಮಯ ನ್ಯೂಸ್, ಹೊನ್ನಾವರ

Exit mobile version