ಶಿಕ್ಷಕರ ದಿನಾಚರಣೆ: ಆದರ್ಶ ಶಿಕ್ಷಕ ವೆಂಕಟ್ರಮಣ ಮಾಸ್ತಿ ನಾಯ್ಕ ಮಾಸೂರು

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮದ ಮಾಸೂರಿನಲ್ಲಿ 15-03-1938ರಂದು ತೆಂಗಿನ ಗಿಡಗಳ ವ್ಯಾಪಾರಿ ಮಾಸ್ತಿ ಹೊನ್ನಪ್ಪ ನಾಯ್ಕ ಮತ್ತು ಮಹಾನ್ ಸಾಧ್ವಿ ನಾಗಮ್ಮ ನಾಯ್ಕರವರ ದ್ವಿತೀಯ ಪುತ್ರರಾಗಿ ಜನಿಸಿದ ನಿವೃತ್ತ ಶಿಕ್ಷಕರಾದ ಶ್ರೀ ವೆಂಕಟ್ರಮಣ ಮಾಸ್ತಿ ನಾಯ್ಕ (ವಿ. ಎಂ. ನಾಯ್ಕ)ರವರು ಮಾಡಿದ ಸಾಧನೆಗಳ ಅವಲೋಕನ ಇಲ್ಲಿದೆ ನೋಡಿ.

ಶ್ರೀ ವಿ. ಎಂ. ನಾಯ್ಕರವರು ಮಾಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ರಸ್ತೆ ಸರಿಯಾಗಿ ಇಲ್ಲದಿರುವ ಅಂದು ನದಿಯ ಬದಿಯ ಹಾಳೆಕಟ್ಟೆ ಮೇಲೆ ನಡೆದು ಹೋಗಿ ಹೆಗಡೆಯ ಶಾಂತಿಕಾಬಾ ಪ್ರೌಢಶಾಲೆಯಲ್ಲಿ SSC (Secondary School Certificate) ಪ್ರೌಢ ಶಿಕ್ಷಣ ಪಡೆದರು. ನಂತರ ಅಂಕೋಲಾದಲ್ಲಿ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ಶಿರಸಿಯ ಬೇಗದ್ದೆಯ ಪ್ರಾಥಮಿಕ ಶಾಲೆಯಲ್ಲಿ ಮೊದಲು ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲು ಪ್ರಾರಂಭಿಸಿದರು.

ನಂತರ ಸರ್ಕಾರದಿಂದ ಇವರು ಆದೇಶ ಪ್ರತಿ ಪಡೆದು ಶಿಕ್ಷಕರಾಗಿ ನೇಮಕವಾಗಿ ಶಿರಸಿಯ ಗ್ರಾಮೀಣ ಪ್ರದೇಶವಾದ ಜಾಗನಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಕಲಿಸುವ ಮಹಾನ್ ಕಾಯಕ ಶಿಕ್ಷಕ ವೃತ್ತಿ ಪ್ರಾರಂಭಿಸಿದರು. ಹೆಗಡೆ ಗ್ರಾಮದ ಚಿಟ್ಟೆಕಂಬಿ, ದೀವಗಿ, ಮಾಸೂರು, ನವಿಲಗೋಣ, ಚಿಪ್ಪಿಹಕ್ಕಲ, ತಲಗೋಡು, ಬೆಲಕೊಂಡ-ಹೊನ್ನಾವರ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 33ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಏನು ವ್ಯವಸ್ಥೆ ಇಲ್ಲದ ಕೇವಲ 4ನೇ ತರಗತಿವರೆಗೆ ಇದ್ದ ಹೊನ್ನಾವರ ತಾಲೂಕಿನ ತಲಗೋಡು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಊರಿನ ಗ್ರಾಮಸ್ಥರ ಮನವೊಲಿಸಿ, ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿ, ಹೋರಾಟ ಮಾಡಿ, ಶಾಲಾ ಕೊಠಡಿಗಳನ್ನು ನಿರ್ಮಿಸಿ 5ರಿಂದ 7ನೇ ತರಗತಿವರೆಗೆ ತರಗತಿ ಪ್ರಾರಂಭಿಸಿ ಅಂದಿನ ಜಿಲ್ಲಾ ಶಿಕ್ಷಣ ಉಪನಿರ್ದೇಶಕರಿಂದ ಜಿಲ್ಲಾ ಪ್ರಶಸ್ತಿ ಗಳಿಸಿದ ಹೆಗ್ಗಳಿಕೆ ಇವರದು.

ಸಾರಿಗೆ ಸಂಪರ್ಕ ಸರಿಯಾಗಿ ಇಲ್ಲದೆ ಇರುವ ಅಂದಿನ ದಿನಗಳಲ್ಲಿ ತಾವೇ ಕಾಲ್ನಡಿಗೆಯಿಂದ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಹೋಗಿ ಮಕ್ಕಳಿಗೆ ಅಗತ್ಯವಿರುವ ಪುಸ್ತಕ, ಆಹಾರ ಪೊಟ್ಟಣ, ಸಮವಸ್ತ್ರಗಳನ್ನು ತಾವೇ ಹೊತ್ತುಕೊಂಡು ಶಾಲೆಗೆ ತಂದು ಮಕ್ಕಳಿಗೆ ವಿತರಿಸುವ ಮಹಾನ್ ಸಂತ ಇವರು.

ಬಡತನದ ಬೇಗೆಯಿಂದ ಶಾಲೆ ಬಿಡುತ್ತಿರುವ ಮಕ್ಕಳ ಮನೆ ಮನೆಗೆ ತೆರಳಿ ಪಾಲಕರ ಮನವೊಲಿಸಿ, ಮನೆಯಿಂದ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಂದು ಅವರಿಗೆ ವಿದ್ಯಾಭ್ಯಾಸ ಮಾಡಿಸಿ ಸಾವಿರಾರು ಮಕ್ಕಳಿಗೆ ಭವಿಷ್ಯ ರೂಪಿಸಿಕೊಟ್ಟ ಮಹಾನ್ ದಾರ್ಶನಿಕ ಇವರು.
ತಮ್ಮ ವೃತ್ತಿ ಜೀವನದಲ್ಲಿ ಎಳ್ಳಷ್ಟೂ ಕಪ್ಪು ಚುಕ್ಕೆ ಇಲ್ಲದೆ ಅನವಶ್ಯಕವಾಗಿ ರಜೆಗಳನ್ನು ತೆಗೆದುಕೊಳ್ಳದೆ ವರ್ಷದ ಎಲ್ಲ ಶಾಲಾ ದಿನಗಳಲ್ಲಿ ಸದಾ ಹಾಜರಾತಿ ಇರುವ ಪ್ರಾಮಾಣಿಕ ಶಿಕ್ಷಕರು.

ತಮ್ಮ ತಂದೆ ತಾಯಿಯವರ ಸೇವೆಗೋಸ್ಕರ ನವಿಲಗೋಣ ಶಾಲೆಯಿಂದ ತಮ್ಮ ಊರು ಮಾಸೂರಿಗೆ ಆಗಮಿಸಿ, ನಿಸ್ವಾರ್ಥವಾಗಿ ಶೃದ್ಧೆಯಿಂದ ತಂದೆ ತಾಯಿಯ ಸೇವೆ ಮಾಡಿ, ತಮ್ಮ ಮಕ್ಕಳಿಗಷ್ಟೇ ಅಲ್ಲದೇ ಕಿರಿಯ ಸಹೋದರ, ಸಹೋದರಿ ಮತ್ತು ಹಿರಿಯ ಸಹೋದರನ ಮಕ್ಕಳಿಗೆ ತಾವೇ ಪಾಲನೆ-ಪೋಷಣೆ ಮಾಡಿ ಅವರ ಭವಿಷ್ಯ ರೂಪಿಸಿದ ಮಹಾನ್ ಶಿಲ್ಪಿ ಹಾಗೂ ಮಾಸೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 12ವರ್ಷಗಳ ಕಾಲ ಸೇವೆ ಸಲ್ಲಿಸಿದ ಶ್ರೀ ರಾಮಚಂದ್ರನ ಪ್ರತಿರೂಪ ಇವರು.

ತಾವು ಸೇವೆ ಸಲ್ಲಿಸಿದ ಅನೇಕ ಶಾಲೆಗಳಲ್ಲಿ ಸನ್ಮಾನಿತರಾದ ಇವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ “ವೆಂಟ್ರ ಮಾಸ್ತರರು” ಇವರು.
ಮಾಸೂರಿನ “ವೆಂಟ್ರ ಮಾಸ್ತರರು” ಎಂದರೆ ಊರಿನ ನಾಗರಿಕರಿಗೆ ಗೋವಿಂನಂತ ಮಹಾನ್ ದೇವತಾ ಪುರುಷರು ಎಂದರೆ ಅತಿಶಯೋಕ್ತಿಯಾಗಲಾರದು. ಸದಾ ಶಾಖಾಹಾರಿಯಾಗಿರುವ ಸಾತ್ವಿಕ ಮನೋಭಾವದ, ದೈವಿ ಭಕ್ತರಾಗಿದ್ದು ಸದಾ ಆಧ್ಯಾತ್ಮಿಕ ಚಿಂತನೆಯಲ್ಲೇ ತೊಡಗಿ, ಎಲ್ಲರಿಗೂ ಸದಾ ಮಾರ್ಗದರ್ಶನ ನೀಡುತ್ತಿರುವ ವೆಂಕಟ್ರಮಣ ಮಾಸ್ತರರ ಗರಡಿಯಲ್ಲಿ ಪಳಗಿದ ಸಹಸ್ರಾರು ವಿದ್ಯಾರ್ಥಿಗಳು ಇಂದು ದೇಶ ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿ ಇದ್ದಾರೆ.

ಪತ್ನಿ ಮತ್ತು ತಮ್ಮ ಹಿರಿಯ ಪುತ್ರನನ್ನು ಕಳೆದುಕೊಂಡ ಇವರು ಎಷ್ಟೋ ನೋವನ್ನು ಉಂಡರೂ ಕೂಡ ಮಹಾನ್ ಯೋಗಿಯಂತೆ ಬದುಕಿ ಎಲ್ಲರಿಗೂ ಮಾದರಿಯಾಗಿದ್ದರು. ತಮ್ಮ ದ್ವಿತೀಯ ಪುತ್ರ ರಮೇಶ, ಸೊಸೆ ಪೂರ್ಣಿಮಾ, ಹಿರಿಯ ಮಗಳು ಗೀತಾ, ಎರಡನೇ ಮಗಳು ಗಾಯತ್ರಿ ಮೊಮ್ಮಕ್ಕಳಾದ ಅಭಿಷೇಕ, ಪ್ರೀತಮ್, ಚರಿಷ್ಮಾ, ಚಿಂತನಾ, ರಶ್ಮಿ ಮತ್ತು ಹರ್ಷಿಕಾ, ಸಮಸ್ತ ಅಭಿಮನ್ಯು ಮನೆ ಕುಟುಂಬ ಮತ್ತು ಎಲ್ಲರ ಜೊತೆ ಸಂತಸವಾಗಿ ಬದುಕಿದ್ದ ಇವರು ವಯೋಸಹಜ ಖಾಯಿಲೆಯಿಂದ ದಿನಾಂಕ 18-08-2024ರಂದು ಇಹಲೋಕವನ್ನು ತ್ಯಜಿಸಿರುವುದು ಶೈಕ್ಷಣಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಇಂತಹ ಮಹಾನ್ ಶಿಕ್ಷಕರನ್ನು ಶಿಕ್ಷಕರ ದಿನಾಚರಣೆಯ ದಿನವಾದ ಇಂದು ಸ್ಮರಿಸುವುದೇ ನಾವು ಅವರಿಗೆ ನೀಡುವ ಮಹಾನ್ ಗೌರವ.

ರಮೇಶ ವಿ. ನಾಯ್ಕ, ಮಾಸೂರು

Exit mobile version