ಅಯೋಧ್ಯೆ ರಾಮಲಲ್ಲಾ ಮಾದರಿ ಗಣೇಶ: ಕೈಮುಗಿದು ಪ್ರಾರ್ಥಿಸುತ್ತಿರುವ ಚಿತ್ರನಟ ಯಶ್

ಅಂಕೋಲಾ: ತಾಲೂಕಿನ ಅವರ್ಸಾದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಪ್ರತಿಷ್ಠಾಪಿಸಿ ಪೂಜಿಸುತ್ತಿರುವ ರಾಮಲಲ್ಲಾ ಮಾದರಿಯ ಗಣಪ ಅತ್ಯಂತ ಸುಂದರವಾಗಿ ಮೂಡಿ ಬಂದಿದೆ. ಈ ಮಹಾಗಣಪನಿಗೆ ಚಿತ್ರನಟ ಯಶ್ ಕೈಮುಗಿದು ಪ್ರಾರ್ಥಿಸುತ್ತಿರುವ ಗೊಂಬೆ ಮಾದರಿ ದೃಶ್ಯ ನೋಡುಗರ ಕಣ್ಮನ ಸೂರೆಗೊಳ್ಳುತ್ತಿದೆ.

ಇದನ್ನೂ ಓದಿ: ಇಲ್ಲಿದೆ ಉದ್ಯೋಗಾವಕಾಶ: 1476 ಹುದ್ದೆಗಳಿಗೆ ನೇಮಕಾತಿ: SSLC ಆದವರು ಅರ್ಜಿ ಸಲ್ಲಿಸಿ

ವಿಶ್ವದೆಲ್ಲೆಡೆ ಗಣೇಶ ಚತುರ್ಥಿಯ ಸಂಭ್ರಮ ಜೋರಾಗಿದ್ದು ಇದೇ ವೇಳೆ ಅಂಕೋಲಾ ತಾಲೂಕಿನ ಅವರ್ಸಾದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ 41 ನೇ ವರ್ಷದ ಆಚರಣೆ ವಿಜೃಂಭಣೆಯಿಂದ ನಡೆಯುತ್ತಿದೆ. ಮೂರ್ತಿ ತಯಾರಿಕೆಯಲ್ಲಿ ಸಿದ್ದ ಹಸ್ತರಾಗಿರುವ ಕೋಮಾರ ಪಂತ ಸಮಾಜದ ಗುರುಮನೆ ಎಂದೇ ಪ್ರಸಿದ್ಧಿ ಯಾಗಿರುವ ಮೇತ್ರಿ ಕುಟುಂಬದ,ಅಪ್ರತಿಮ ಯುವ ಕಲಾಕಾರ ದಿನೇಶ್ ಮೇತ್ರಿ ಕೈಯಲ್ಲಿ ಅರಳಿದ ಅಯೋಧ್ಯೆಯ ರಾಮಲಲ್ಲಾ ಮಾದರಿಯ ಸುಂದರ ಗಣಪ ಭಕ್ತಾದಿಗಳ ಮನಸೂರೆಗೊಳ್ಳುತ್ತಿದೆ.

ಈ ಮಹಾಗಣಪನಿಗೆ ಹೆಸರಾಂತ ಚಿತ್ರನಟ ಯಶ್ ಕೈ ಮುಗಿದು ಪ್ರಾರ್ಥನೆ ಸಲ್ಲಿಸುತ್ತಿರುವಂತೆ ಮೂಡಿಸಲಾದ ಗೊಂಬೆ ಮಾದರಿಯ ದೃಶ್ಯ,ಉತ್ಸವದ ಮೆರಗನ್ನು ಇನ್ನಷ್ಟು ಹೆಚ್ಚಿಸಿ,ದೈವಭಕ್ತರನ್ನಷ್ಟೇ ಅಲ್ಲದೇ,ಚಿತ್ರ ರಸಿಕರು ಮತ್ತು ಯಶ್ ಅಭಿಮಾನಿಗಳ ಮನಸೂರೆ ಗೊಳ್ಳುತ್ತಿದ್ದು,ಮಹಾಗಣಪನನ್ನು ಪ್ರತಿಷ್ಠಾಪನ ಮೆರವಣಿಗೆಯಲ್ಲಿ ಮೇತ್ರಿ ಮನೆಯಿಂದ ಅವರ್ಸಾದ ಗಾಂಧಿ ಮೈದಾನದ ಪ್ರತಿಷ್ಠಾಪೀಠಕ್ಕೆ ತರುತ್ತಿರುವ ವಿಡಿಯೋ,ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಹೀಗಾಗಿ ಅವರ್ಸಾದ ಈ ಸುಂದರ ಗಣಪ ಮತ್ತು ಯಶ್ ಗೊಂಬೆ ಮಾದರಿ ಕಲಾ ಪ್ರಕಾರವನ್ನು ನೋಡಲು ಜನರು ಮುಗಿ ಬೀಳುತ್ತಿದ್ದಾರೆ.ಯುವ ಕಲಾವಿದ ದಿನೇಶ್ ಮೇತ್ರಿ ಈ ಹಿಂದೆಯೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪ್ರತಿಕ್ರತಿ ರಚಿಸಿ,ಕೌನ್ ಬನೇಗಾ ಕರೋಡ ಪತಿ ಮಾದರಿಯಲ್ಲಿ ,ಕನ್ನಡದ ಕೋಟ್ಯಾಧಿಪತಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನಿರೂಪಕನಂತೆ,ಮಹಾಗಣಪತಿಯ ಪಕ್ಕದಲ್ಲಿ ಕುಳಿತಿರುವ ದೃಶ್ಯ ಹಲವರ ಗಮನ ಸೆಳೆದಿತ್ತು.

ಇದಲ್ಲದೆ ಕಳೆದ ಅನೇಕ ವರ್ಷಗಳಿಂದ ಬೇರೆ ಬೇರೆ ಮಾದರಿ ಹಾಗೂ ಪೌರಾಣಿಕ ಹಿನ್ನೆಲೆಯಲ್ಲಿ ಹತ್ತಾರು ಗಣಪನ ಮೂರ್ತಿಯನ್ನು ಮಾಡಿ ಲಕ್ಷಾಂತರ ಜನರ ಹೃದಯ ಗೆದ್ದಿದ್ದರುವ ಇವರು ಇವರ ಕುಟುಂಬದ ಹಿರಿಯರ ಕಲಾಸಿರಿವಂತಿಕೆಯನ್ನು ಗೌರವಿಸಲೇಬೇಕಿದೆ.ಈ ಹಿಂದೆ ಕಾಗೇರಿಯವರು ಶಿಕ್ಷಣ ಸಚಿವರಾಗಿದ್ದಾಗ,ವಿದ್ಯಾಮಂತ್ರಿಯ ಗೆಟಪ್ ಪಿನಲ್ಲಿ ಕಲಾಕೃತಿ ರಚಿಸಿದ್ದು ನಾಡಿನಾದ್ಯಂತ ಸುದ್ದಿಯಾಗಿತ್ತು.

ಒಟ್ಟಿನಲ್ಲಿ ಅವರ್ಸಾದ ಸಾರ್ವಜನಿಕ ಗಣೇಶೋತ್ಸವ ಸಮಿತಿ ವರ್ಷದಿಂದ ವರ್ಷಕ್ಕೆ ಅದ್ದೂರಿ ಹಾಗೂ ವಿಜೃಂಭಣೆಯ ಹಾಗೂ ಕೆಲ ಸಾಂದರ್ಭಿಕ ಕಾಲಘಟ್ಟ ಗಟ್ಟಗಳಿಗನುಗುಣವಾಗಿ ಎಲ್ಲರಲ್ಲೂ ಕುತೂಹಲ ಮೂಡಿಸುತ್ತಾ, ಸಂತಸ ತರುತ್ತಾ, ಹಬ್ಬದ ಆಚರಣೆಯ ಮಹತ್ವ ಹೆಚ್ಚಿಸುತ್ತಾ ನಾಲ್ಕು ದಶಕಗಳನ್ನು ದಾಟಿ ಮುನ್ನಡೆಯುತ್ತಿದ್ದು, ಈ ಯಶಸ್ವಿ ಸಂಘಟನೆಗೆ ಹಲವೆಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version