ಮುಗ್ದ ಹೆಣ್ಣುಮಕ್ಕಳ ವಂಚಿಸುತ್ತಿದ್ದ ಚಾಲಾಕಿ ಮಹಿಳೆ ಬಂಧನ

ಶಿರಸಿ: ಎಟಿಎಂಗಳಲ್ಲಿ ಹಣ ಪಡೆಯಲು ನೆರವು ನೀಡುವ ನೆಪದಲ್ಲಿ ಮುಗ್ಧ ಹೆಣ್ಣು ಮಕ್ಕಳಿಗೆ ಮೋಸ ಮಾಡಿ ಎಟಿಎಂ ಕಾರ್ಡ್ ಬದಲಾಯಿಸಿ ಹಣ ತೆಗೆದು ವಂಚಿಸುತ್ತಿದ್ದ ಚಾಲಾಕಿ ಮಹಿಳೆಯನ್ನು ಶಿರಸಿ ನಗರದ ಹೊಸ ಮಾರುಕಟ್ಟೆ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ನೇಮಕಾತಿ: ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ: Canara Bank Recruitment

ಈಕೆ ಮುಗ್ಧ ಮಹಿಳೆಯರು ಎಟಿಎಂನಲ್ಲಿ ಹಣ ತೆಗೆಯುವುದನ್ನು ಗಮನಿಸಿ ಎಟಿಎಂ ಒಳಗಡೆ ಪ್ರವೇಶಿಸುತ್ತಿದ್ದಳು. ಬಳಿಕ ಹಣ ತೆಗೆಯುವುದಕ್ಕೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಪಾಸ್‌ವರ್ಡ್ ಹಾಕಲು ಹೇಳಿ ಪಾಸ್ ವರ್ಡ್ ನೋಡಿಕೊಂಡು ಆ ಎಟಿಎಂ ಕಾರ್ಡ್ ತನ್ನ ಬಳಿ ಇಟ್ಟುಕೊಂಡು, ಅವರು ತೆರಳಿದ ಬಳಿಕ ಅವರ ಎಟಿಎಂ ಕಾರ್ಡ್ ಬಳಸಿ, ಹಣ ತೆಗೆಯುತ್ತಿದ್ದಳು.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬೋವಿ ಕಾಲೋನಿಯ ಹಾಲಿ ನೆಹರುನಗರದ ನಿವಾಸಿ ಕೌಸರಬಾನು ನಜೀರ್ ಸಾಬ್ ಇಸ್ರಾ ಅಹಮ್ಮದ ಬಂಕಾಪುರ ಬಂಧಿತ ಮಹಿಳೆಯಾಗಿದ್ದಾಳೆ. ಈ ಬಗ್ಗೆ ಹಲವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಕೊಂಡ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಮೋಸ ಮಾಡುತ್ತಿದ್ದ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿತಳು ಕೃತ್ಯಕ್ಕೆ ಬಳಸುವ ವಿವಿಧ ಬ್ಯಾಂಕಿನ ಸುಮಾರು 30 ಎಟಿಎಂ ಕಾರ್ಡ್ ಮತ್ತು ನಗದು ಹಣವನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version