ಬಸ್ ನಿಲ್ದಾಣದ ಎದುರು ನಿಲ್ಲಿಸಿಟ್ಟ ಬೈಕ್ ಕಳ್ಳತನ: ಆರೋಪಿ ವಶಕ್ಕೆ ಪಡೆದ ಪೊಲೀಸರು

ಅಂಕೋಲಾ : ಇತ್ತೀಚಿನ ದಿನದಲ್ಲಿ ಅಂಕೋಲಾದಲ್ಲಿ ಮತ್ತೆ ಬೈಕ್ ಕಳ್ಳರ ಹಾವಳಿ ಮುಂದುವರೆದಿದ್ದು,ಬಸ್ ನಿಲ್ದಾಣದ ಎದುರು ಮತ್ತಿತರಡೆ ,ಬೇರೆ ಬೈಕ್ ಕೀಗಳನ್ನು ಬಳಸಿ ಇಲ್ಲವೇ ಇತರೆ ರೀತಿಯಲ್ಲಿ ಯಾರೋ ಕಳ್ಳತನಕ್ಕೆ ಸಂಚುರೂಪಿಸುವ,ಕಳ್ಳತನ ಮಾಡುತ್ತಿರುವ ದೂರುಗಳು ಕೇಳಿ ಬರ ಲಾರಂಭಿಸಿದ್ದವು .ಅಂತವರ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದ ಅಂಕೋಲಾ ಪೊಲೀಸರು ಬಸ್ ನಿಲ್ದಾಣದಲ್ಲಿಟ್ಟಿದ್ದ ಬೈಕ್ ಕದ್ದ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಯಶಸ್ವೀ ಕಾರ್ಯಾಚರಣೆ ನಡೆಸಿ, ಬೈಕ್ ಸಮೇತ ಆರೋಪಿತ ನೋರ್ವನನ್ನು ವಶಕ್ಕೆ ಪಡೆದು ಕಾನೂನು ಕ್ರಮ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಬೃಹತ್ ಉದ್ಯೋಗಾವಕಾಶ: ರೈಲ್ವೆಯಲ್ಲಿ ಬೃಹತ್ ನೇಮಕಾತಿ: 3445 ಹುದ್ದೆಗಳು: ಪಿಯುಸಿ ಆದವರು ಅರ್ಜಿ ಸಲ್ಲಿಸಬಹುದು

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಮಲ್ಲಿಕಾರ್ಜುನ ದೇವಿಶೆಟ್ಟಿ (39 ) ಬಂಧಿತ ಆರೋಪಿತನಾಗಿದ್ದಾನೆ. ಅಂಕೋಲಾ ತಾಲೂಕಿನ ಪಿ.ಎಂ ಹೈ ಸ್ಕೂಲ್ ಬಳಿಯ ಲಕ್ಷ್ಮೇಶ್ವರ ನಿವಾಸಿ ಮಹಮ್ಮದ್ ಗೌಸ್ ಇವರು,ತನ್ನ ಕೆಲಸದ ನಿಮಿತ್ತ ಅಂಕೋಲಾ ದಿಂದ ಹುಬ್ಬಳ್ಳಿಗೆ ಹೊರಡುವಾಗ ಬಸ್ ನಿಲ್ದಾಣದ ಎದುರಿನ ಪಾರ್ಕಿಂಗ್ ಜಾಗದಲ್ಲಿ ತಮ್ಮ ಹೋಂಡಾ ಡಿಯೋ ಬೈಕ್ ನಿಲ್ಲಿಸಿಟ್ಟು,ಕೆಲಸ ಮುಗಿಸಿ ರಾತ್ರಿ ವೇಳೆ ಅಂಕೋಲಾಕ್ಕೆ ಬಂದು ತಾನು ನಿಲಿಸಿಟ್ಟ ಜಾಗದಲ್ಲಿ ಬೈಕ್ ಇರದೇ ,ನಾಪತ್ತೆಯಾಗಿರುವ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪಿಎಸ್ಐ ಜಯಶ್ರೀ ಪ್ರಭಾಕರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪ್ರಶಾಂತ ನಾಯ್ಕ, ಆಸೀಪ್ ಕುಂಕೂರು, ಮನೋಜ ಡಿ, ಶ್ರೀಕಾಂತ ಕಟಬರ ,ಕಳ್ಳತನ ಕೃತ್ಯದ ಮಾಹಿತಿ ಕಲೆಹಾಕಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ,ಯಶಸ್ವೀ ಕಾರ್ಯಾಚರಣೆ ನಡೆಸಿ,ಬೈಕ್ ಸಮೇತ ಆರೋಪಿತನನ್ನು ವಶಕ್ಕೆ ಪಡೆದು ಕಾನೂನು ಕ್ರಮ ಮುಂದುವರಿಸಿದ್ದಾರೆ.

ಪೊಲೀಸರ ಈ ಯಶಸ್ವೀ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಇದೇ ವೇಳೆ ಪೊಲೀಸರು ಈ ಹಿಂದಿನ ಕೆಲ ಕಳ್ಳತನ ಪ್ರಕರಣಗಳನ್ನು ಭೇದಿಸುವ ಸವಾಲು ಮತ್ತು ಜವಾಬ್ದಾರಿ ಇದೆ.ಅಂತಯೇ ಸಾರ್ವಜನಿಕರು ಸಹ ತಮ್ಮ ವಾಹನ, ಮತ್ತಿತರ ಬೆಲೆಬಾಳುವ ವಸ್ತುಗಳು ಕಳ್ಳತನ ವಾಗುವುದನ್ನು ತಪ್ಪಿಸಲು ಸ್ವಯಂ ಪ್ರೇರಿತರಾಗಿ ಕೆಲ ಮುಂಜಾಗ್ರತೆ ತೆಗೆದುಕೊಳ್ಳಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version