ಬುದ್ದಿವಾದ ಹೇಳಿದ್ದಕ್ಕೆ ಮಗನ ಮೇಲೆ ಗುಂಡುಹಾರಿಸಿದ ಅಪ್ಪ

ಯಲ್ಲಾಪುರ: ಕುಡಿತದ ಚಟಕ್ಕೆ ದುಂದು ವೆಚ್ಚ ಮಾಡಬೇಡ ಎಂದು ಬುದ್ದಿ ಹೇಳಿದ ಮಗನ ಮೇಲೆ ತಂದೆ ಪರವಾನಗಿ ಇಲ್ಲದ ನಾಡಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಲು ಯತ್ನಿಸಿದ ಘಟನೆ ಯಲ್ಲಾಪುರ ತಾಲೂಕಿನ ಬಳಗಾರ ಕ್ರಾಸ್‍ನಲ್ಲಿರುವ ಆರತಿ ಬೈಲ್ ಸಮೀಪ ನಡೆದಿದೆ. ಆರತಿಬೈಲ್ ನಿವಾಸಿ ರಾಮಾ ಪುಟ್ಟಾ ಸಿದ್ದಿ ಎಂಬಾತನೇ ತನ್ನ ಮಗನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ವ್ಯಕ್ತಿ. ಈತನು ಅಡಿಕೆ ತೋಟದ ಫಸಲನ್ನು ಮಾರಿ ನಿತ್ಯವೂ ಕುಡಿದು ದುಂದು ವೆಚ್ಚ ಮಾಡುವುದನ್ನು ಆಕ್ಷೇಪಿಸಿದ ಮಗ ಮಂಜುನಾಥ ರಾಮಾ ಸಿದ್ದಿ ಹಾಗೂ ಮಂಜುನಾಥನ ತಾಯಿ ಬುದ್ದಿ ಹೇಳಿದ ಕಾರಣಕ್ಕೆ ಸಿಟ್ಟಿಗೆದ್ದ ಆರೋಪಿ ರಾಮಾ ಪುಟ್ಟ ಸಿದ್ದಿ ತೋಟದಲ್ಲಿ ಅನಧಿಕೃತವಾಗಿ ಇಟ್ಟ ನಾಡ ಬಂದೂಕು ಹಿಡಿದು ಮಗನಿಗೆ ಅವಾಚ್ಯ ಶಬ್ಧಗಳಿಂದ ಬೈದು ಕೊಲೆ ಬೆದರಿಕೆ ಹಾಕಿ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದಾನೆ.

ಗುಂಡು ಹಾರಿಸಿದ ಪರಿಣಾಮ ಮಂಜುನಾಥನ ತೊಡೆಯ ಮೇಲ್ಭಾಗ ಮತ್ತು ಎಡಗೈ ಹೆಬ್ಬೆರಳಿಗೆ ಗಾಯಗಳಾಗಿವೆ. ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಕಿತ್ಸೆ ನೀಡಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕ್ರಿಮ್ಸ್‍ಗೆ ದಾಖಲಿಸಲಾಗಿದೆ. ಈ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ರೇಣುಕಾ ಮಂಜುನಾಥ ಸಿದ್ದಿ ದೂರು ನೀಡಿದ್ದು, ದೂರು ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

“ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”

Exit mobile version