ಭಟ್ಕಳದ ಸಮೀಪ ಬಾಂಬ್ ಪತ್ತೆ ಮಾಡಿದ ಕರಾವಳಿ ರೆಡ್ ಫೋರ್ಸ್ ಪಡೆ: ಆರೋಪಿಗಳ ಬಂಧನ, ಮದ್ದುಗುಂಡು ವಶ!

ಭಟ್ಕಳ: ತಾಲೂಕಿನ ಅಳಿವೆಕೋಡಿಯಲ್ಲಿ ಐವರು ಭಯೋತ್ಪಾದಕರನ್ನು ಭಟ್ಕಳ ಪೊಲೀಸ್ ಇಲಾಖೆ ಹಾಗೂ ಕರಾವಳಿ ಕಾವಲು ಪಡೆ ನೇತೃತ್ವದಲ್ಲಿ ನೇತ್ರಾಣಿ ಸಮೀಪ ಕರಾವಳಿ ರೆಡ್ ಫೋರ್ಸ್ ಪಡೆ ಬಾಂಬ್ ಪತ್ತೆ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿ ಅವರಿಂದ ಮದ್ದುಗುಂಡುಗಳನ್ನು ವಶಪಡಿಸಿಕೊಂಡು, ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಕಾರವಾರಕ್ಕೆ ಕರೆದುಕೊಂಡ ಹೋದ ಘಟನೆ ಮಂಗಳವಾರ ನಡೆದಿದೆ.

ಭಟ್ಕಳದ ಅಳ್ವೆಕೋಡಿ ಬಂದರಿನಿoದ ಸುಮಾರು 80 ನಾಟಿಕಲ್ ಮೈಲ್ ದೂರ ನೇತ್ರಾಣಿ ಗುಡ್ಡದ ಸಮೀಪ ಸಮುದ್ರದಲ್ಲಿ ಶ್ರೀ ರಾಮ ರಕ್ಷಾ ಫಿಶಿಂಗ್ ಬೋಟ್‌ನಲ್ಲಿ ಬಾಂಬ್ ತರುತ್ತಿರುವಾಗ ಕರಾವಳಿ ಕಾವಲು ಪಡೆಯ ರೆಡ್ ಪೊರ್ಸ್ ಪೊಲೀಸರು ಹುಸಿ ಬಾಂಬ್ ಪತ್ತೆ ಮಾಡಿ ಬೋಟ್ ನಲ್ಲಿ ಬಂದ 5 ಜನರನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆ ನಡೆಯುತಿರುವಂತೆ ಭಟ್ಕಳ ಒಮ್ಮೆ ಬೆಚ್ಚಿ ಬಿದ್ದಿದೆ. ನದಿ, ಸಮುದ್ರ ತಟದ ಮೀನುಗಾರರು ಕೂಡ ಒಮ್ಮೆ ದಂಗಾಗಿ ಹೋಗಿದ್ದರು. ಆದರೆ ಬೆಚ್ಚಿ ಬೀಳುವ ಘಟನೆ ಅಣುಕು ಕಾರ್ಯಚರಣೆ ಎಂದು ತಿಳಿದು ಬರುತ್ತಿದ್ದಂತೆ ನಂತರ ನಿಟ್ಟುಸಿರು ಬಿಟ್ಟಿದ್ದಾರೆ. ಭಯೋತ್ಪಾದಕ ಚಟುವಟಿಕೆ ಹಾಗೂ ಅಕ್ರಮಗಳನ್ನು ತಡೆಗಟ್ಟಲು ರಕ್ಷಣಾ ಇಲಾಖೆಗಳನ್ನು ಜಾಗೃತಗೊಳಿಸಲು ಪೊಲೀಸ್ ಇಲಾಖೆ ನೇತೃತ್ವದಲ್ಲಿ ನಡೆದ ಸಾಗರ ಕವಚ ಅಣಕು ಕಾರ್ಯಾಚರಣೆಯ ಪ್ರಸಂಗವಿದು.

ಈ ಕಾರ್ಯಾಚರಣೆಯ ನಿಮಿತ್ತ ಕರಾವಳಿ ತಾಲೂಕಿನ ವಿವಿಧೆಡೆ ಪೊಲೀಸರು ನಾಕಾ ಬಂಧಿ ಹಾಕಿದ್ದರು. ರಸ್ತೆ ಮೂಲಕ ಸಂಚರಿಸುವ ಬಹುತೇಕ ವಾಹನಗಳನ್ನು ಪೊಲೀಸರು ತಡೆದು ತಪಾಸಣೆ ನಡೆಸಿದರು. ಇದರಿಂದ ಜನರಲ್ಲೂ ಅತಂಕ ಮೂಡಿತ್ತು. ನಂತರ ಇದು ಅಣಕು ಕಾರ್ಯಚರಣೆ ಎಂದು ತಿಳಿದು ಬರುತ್ತಿರುವಂತೆ ಜನರು ಕೂಡ ಸಹಕಾರ ನೀಡಿದ್ದಾರೆ.

ಕಾರ್ಯಚರಣೆಯಲ್ಲಿ ಭಟ್ಕಳ ಸಿಪಿಐ ದಿವಾಕರ ಪಿ, ಪಿಎಸ್‌ಐ ಒಂಕಾರಪ್ಪ, ಕರಾವಳಿ ಕಾವಲು ಪಡೆಯ ಸಿಪಿಐ ನಾಗರಾಜ ಎಚ್.ಇ, ಸಿಬ್ಬಂದಿ ರವಿಕುಮಾರ, ದಿನೇಶ, ಶಿವಾನಂದ ಮೊಗೇರ, ಮಲ್ಲಪ್ಪ ಗೌಡ, ಸಂಜೀವ ಇತರರು ಇದ್ದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version