ರೂಮಿನಲ್ಲಿ ಕೂಡಿಹಾಕಿ ನಗ್ನಗೊಳಿಸಿ ವಿಡಿಯೋ ಚಿತ್ರೀಕರಣ ಆರೋಪ: ವಿಡಿಯೋ ಡಿಲಿಟ್ ಮಾಡಲು 15 ಲಕ್ಷಕ್ಕೆ ಬೇಡಿಕೆ: ಮಹಿಳೆ ಸೇರಿ ಮೂವರ ಬಂಧನ

ಶಿರಸಿ: ಸುಲಿಗೆ ಪ್ರಕರಣದಲ್ಲಿ ಭಾಗಿಯಾದ ಮೂವರು ಆರೋಪಿಗಳನ್ನು ಇಲ್ಲಿನ ಹೊಸ ಮಾರುಕಟ್ಟೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಶಿರಸಿಯ ಅಜಿತ ಶ್ರೀಕಾಂತ ನಾಡಿಗ, ಗೋಲಗೇರಿ ಓಣಿಯ ಧನುಶ್ಯಕುಮಾರ ದಿಲೀಪಕುಮಾರ ಶೆಟ್ಟಿ ಹಾಗೂ ಶಿವಮೊಗ್ಗದ ಪದ್ಮಜಾ ಡಿ. ಎನ್. ಬಂಧಿತರು ಎಂದು ತಿಳಿದುಬಂದಿದೆ.

ಇಲ್ಲಿನ ವ್ಯಕ್ತಿಯೋರ್ವರಿಗೆ ಸರ್ಕಾರಿ ಖಾಯಂ ಉಪನ್ಯಾಸಕ ಹುದ್ದೆ ಕೊಡಿಸುತ್ತೇವೆ ಎಂದು ನಂಬಿಸಿ ಆರೋಪಿಗಳು ಶಿವಮೊಗ್ಗಕ್ಕೆ ಕರೆಸಿಕೊಂಡಿದ್ದರು. ಈ ವೇಳೆ ಕೋಣೆಯಲ್ಲಿ ಕೂಡಿಹಾಕಿ ನಗ್ನಗೊಳಿಸಿ, ದೂರುದಾರರ ಫೋಟೊ ಹಾಗೂ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರುದಾರರ ತಂದೆಯವರನ್ನು ಭೇಟಿ ಮಾಡಿ ನಗ್ನ ಫೋಟೊ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತೇವೆ ಎಂದು ಬೆದರಿಸಿದ್ದಾರೆ. ಇದನ್ನು ಡಿಲೀಟ್ ಮಾಡಬೇಕು ಎಂದಾದರೆ 15 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ.

ಅಲ್ಲದೆ, ಬಲವಂತವಾಗಿ ನಕಲಿ ದಾಖಲೆ ಸೃಷ್ಟಿಸಿ, ಕರಾರು ಪತ್ರ ಬರೆಸಿಕೊಂಡಿದ್ದು,, ಬ್ಲಾಂಕ್ ಚೆಕ್ ಪಡೆದುಕೊಂಡಿದ್ದರು. ಹಣ ಕೊಡದೇ ಇದ್ದರೆ ಕೊಲೆ ಮಾಡಲಾಗುವುದು ಎಂದು ಹೆದರಿಸಿದ್ದರು ಎಂದು ಎಫ್‌ಐಆರ್‌ ನಲ್ಲಿ ದಾಖಲಿಸಲಾಗಿದೆ. ದೂರು ದಾಖಲಾದ ಕೂಡಲೇ ಬಂದ ವಿಶೇಷ ತಂಡ ರಚಿಸಿ, ಆರೋಪಿಗಳನ್ನು ಬಂಧಿಸಲಾಗಿದೆ.

ವಿಸ್ಮಯ ನ್ಯೂಸ್ ಶಿರಸಿ

Exit mobile version