ಸ್ಕೂಟಿಗೆ ಡಿಕ್ಕಿಹೊಡೆದ ಲಾರಿ: ಗ್ರಾಮ ಪಂಚಾಯತ್ ಅಧ್ಯಕ್ಷೆ ಗಂಭೀರ

ಕುಮಟಾ: ಲಾರಿ ಹಾಗೂ ಸ್ಕೂಟಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಕೂಟಿ ಚಾಲಕಿ ಸಂಭೀರ ಗಾಯಗೊಂಡ ಘಟನೆ ಕುಮಟಾ ಪಟ್ಟಣದಲ್ಲಿ ನಡೆದಿದೆ. ಕುಮಟಾ ಪಟ್ಟಣದ ಎಲ್.ಐ.ಸಿ ಕಚೇರಿ ಹಾಗೂ ಮಹಾಲಕ್ಷ್ಮಿ ಕಂಫರ್ಟ್ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಲಾರಿಯೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಚಲಾಯಿಸುತ್ತಿದ್ದ ಕುಮಟಾದ ಕಲಭಾಗ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪಟ್ಟಣದ ಅಳ್ವೆದಂಡೆ ನಿವಾಸಿ ಮತ್ತು ಕಲಭಾಗ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ಜೈವಿಠ್ಠಲ್ ಕುಬಾಲ್ ಗಂಭೀರ ಗಾಯಗೊಂಡವರಾಗಿದ್ದು, ಅವರು ತಮ್ಮ ಸ್ಕೂಟರ್ ಮೇಲೆ ಗಿಬ್ ಸರ್ಕಲ್ ಕಡೆಯಿಂದ ಎಲ್.ಐ.ಸಿ ಕಚೇರಿ ಎದುರಿನ ಮಹಾಲಕ್ಷ್ಮಿ ಕಂಫರ್ಟ್ ಗೆ ತೆರಳಲು ಹೆದ್ದಾರಿಯನ್ನು ದಾಟುತ್ತಿರುವಾಗ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಗೀತಾ ಅವರ ತಲೆಯ ಭಾಗಕ್ಕೆ ಗಂಭೀರ ಪೆಟ್ಟು ತಗುಲಿ ಅಧಿಕ ರಕ್ತಶ್ರಾವ ಉಂಟಾಗಿದೆ ಎನ್ನಲಾಗಿದೆ. ತಕ್ಷಣ ಗಾಯಾಳುವನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ

Exit mobile version