Important
Trending

ಪ್ರಯಾಣಿಕರಿಗೆ ಕಲುಷಿತ ರಾಡಿ ನೀರೇ ಗತಿ: ಕುಡಿಯುವ ನೀರಿನ ಘಟಕದಲ್ಲಿ ಬರುತ್ತಿದೆ ಕುಡಿಯಲು ಯೋಗ್ಯವಲ್ಲದ ನೀರು

ಕುಮಟಾ: ಇಲ್ಲಿನ ಹೊಸ ಬಸ್ ನಿಲ್ದಾಣದಲ್ಲಿನ ಕುಡಿಯುವ ನೀರಿನ ಘಟಕದಲ್ಲಿ ಕಲುಷಿತ ನೀರು ಬರುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಲೇ ಇದ್ದು, ನೀರಿನ ಟ್ಯಾಂಕ್ ಸ್ವಚ್ಚಗೊಳಿಸದೇ ಇರುವ ಕಾರಣ ಟ್ಯಾಂಕಿನಲ್ಲಿ ಕೆಸರು ಶೇಕರಣೆಗೊಂಡು ಕುಡಿಯಲು ಯೊಗ್ಯವಲ್ಲದ ನೀರು ಬರುತ್ತಿದೆ ಎಂಬ ಆರೋಪವಿತ್ತು. ಈ ಕುರಿತಾಗಿ ವಿಸ್ಮಯ ಟಿ.ವಿ ಯಿಂದ ಸ್ಥಳಕ್ಕೆ ಭೇಟಿ ನೀಡಿ ಬಾಟಲಿಯೊಂದರಲ್ಲಿ ನೀರನ್ನು ಶೇಕರಣೆ ಮಾಡಿ ಪರಿಶೀಲಿಸಲಾಗಿದ್ದು, ಸಾರ್ವಜನಿಕರ ಆರೋಪದಂತೆ ಕುಡಿಯುವ ನೀರಿನ ಘಟಕದಿಂದ ಕಲುಷಿತ ನೀರು ಬರುತ್ತಿರುವುದು ಖಚಿತವಾಗಿದೆ.

ಕಳೆದ ಒಂದು ವರ್ಷದ ಹಿಂದೆ ಸಂಘಟನೆಯೊoದು ಇಲ್ಲಿನ ನೀರಿನ ಟ್ಯಾಂಕ್ ಅನ್ನು ಶುದ್ಧಗೊಳಿಸುವ ಕಾರ್ಯ ಮಾಡಿತ್ತು. ಅದಾದ ಬಳಿಕ ಇದುವರೆಗೂ ಟ್ಯಾಂಕ್ ಅನ್ನು ಸ್ವಚ್ಚ ಗೊಳಿಸಿಲ್ಲವಾಗಿದ್ದು, ಇದರಿಂದಾಗಿ ಕುಮಟಾದ ಬಸ್ ನಿಲ್ಧಾಣದ ಅಧಿಕಾರಿಗಳು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದಂತಾಗಿದೆ. ಅಲ್ಲದೇ ಬಸ್ ನಿಲ್ಧಾಣದಲ್ಲಿ ಮಹಿಳೆಯರಿಗಾಗಿ ವಿಶ್ರಾಂತಿ ಕೊಟಡಿಯೊಂದನ್ನು ಮೀಸಲಿಡಲಾಗಿದ್ದು, ಈ ಒಂದು ಕೊಟಡಿಯನ್ನು ಹಗಲಿನ ವೇಳೆ ಮಾತ್ರ ಉಪಯೋಗಿಸಲು ಬಿಡುತ್ತಿದ್ದಾರೆ, ರಾತ್ರಿಯ ವೇಳೆ ಈ ಒಂದು ಕೊಠಡಿಯಲ್ಲಿ ಮಹಿಳೆಯರಿಗೆ ವಿಶ್ರಾಂತಿ ಪಡೆಯಲು ಬಿಡುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಈ ಕುರಿತಾಗಿ ಕುಮಟಾದ ಡಿಪೋ ಮ್ಯಾನೇಜರ್ ಅನ್ನು ವಿಸ್ಮಯ ಟಿ.ವಿ ಪ್ರಶ್ನಿಸಿದ್ದು, ಈ ಬಗ್ಗೆ ಪ್ರತಿಕ್ರಿಸಿದ ಅವರು, ಶೀಘ್ರವೇ ನೀರಿನ ಟ್ಯಾಂಕ್ ಅನ್ನು ಸ್ವಚ್ಚಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಸದ್ಯ ದೇಣಿಗೆಯಾಗಿ ಬಂದ ಹೊಸ ನೀರಿನ ಟ್ಯಾಂಕ್ ಮೂಲಕವೇ ನಮ್ಮಲ್ಲಿನ ಕುಡಿಯುವ ನೀರಿನ ಘಟಕಕ್ಕೂ ನೀರನ್ನು ಪೂರೈಸುವ ವ್ಯವಸ್ಥೆ ಮಾಡುತ್ತೇವೆ.

ಬಳಿಕ ಟ್ಯಾಂಕ್ ಸ್ವಚ್ಚ ಗೊಳಿಸುವ ಅಥವಾ ಹೊಸ ಟ್ಯಾಂಕ್ ಅಳವಡಿಸುವ ಕಾರ್ಯ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು. ವಿಶ್ರಾಂತಿ ಕೊಠಡಿಯಲ್ಲಿ ರಾತ್ರಿಯ ವೇಳೆ ಮಹಿಳೆಯರಿಗೆ ವಿಶ್ರಾಂತಿ ಪಡೆಯಲು ಅನುಮತಿ ನೀಡುತ್ತಿಲ್ಲ. ನಮ್ಮಲ್ಲಿ ಸದ್ಯ ಸೆಕ್ಯೂರಿಟಿ ವ್ಯವಸ್ಥೆ ಇಲ್ಲವಾಗಿದೆ. ಮಹಿಳೆಯರ ಸುರಕ್ಷತೆಯ ದೃಷ್ಠಿಯಿಂದಲೇ ವಿಶ್ರಾಂತಿ ಒಡೆಯಲು ಬಿಡುತ್ತಿಲ್ಲ. ಈ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು,

ಪ್ರತಿದಿನ ಸಾವಿರಾರು ಪ್ರಯಾಣಿಕರು ಬಂದು ಹೋಗುವ ಪ್ರಮುಖ ಸ್ಥಳವಾದ ಬಸ್ ನಿಲ್ದಾಣದಲ್ಲೇ ಕಲುಷಿತಗೊಂಡ ಕುಡಿಯುವ ನೀರು ಸಾರ್ವಜನಿಕರು ಕುಡಿಯುವಂತಾಗಿದ್ದು, ವಿಪರ್ಯಾಸವೇ ಸರಿ. ಕೂಡಲೇ ಸಂಬAಧಪಟ್ಟವರು ಈ ಅವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ಮಾಡಬೇಕಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ

Back to top button