ರಜೆ ಪಡೆದು ಲಂಡನ್ ನಿಂದ ಬಂದು ಮತದಾನ: ಜವಾಬ್ದಾರಿಯಿಂದ ಹಕ್ಕು ಚಲಾವಣೆ: ಮಹಿಳೆಯ ಕಾರ್ಯಕ್ಕೆ ಮೆಚ್ಚುಗೆ

ಕಾರವಾರ: ಮಹಿಳೆಯೋರ್ವಳು ಬ್ರಿಟನ್‌ದಿಂದ ಆಗಮಿಸಿ ಮತದಾನ ಮಾಡುವ ಮೂಲಕ ಮತದಾನದ ಮಹತ್ವವನ್ನು ಸಾರಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನ ಮನೆ ಗ್ರಾಮದ ಸುಜಾತ ಗಾಂವಕರ್ ಅವರು ಬ್ರಿಟನ್‌ನಲ್ಲಿ ಕೆಲಸ ಮಾಡುತ್ತಿದ್ದು, ಮತದಾನ ಇರುವ ಹಿನ್ನಲೆಯಲ್ಲಿ ಕೆಲಸಕ್ಕೆ ರಜೆ ಪಡೆದು ಬಂದು ಮಾವಿನ ಮನೆ ಗ್ರಾಮದ ಬಾಸಲ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಮತದಾನದ ಬಳಿಕ ಮಾತನಾಡಿದ ಸುಜಾತಾ ಗಾಂವ್ಕರ ದೇಶದ ಅಭಿವೃದ್ದಿ ಆಗಬೇಕಾದರೆ ಮತದಾನ ಮಾಡುವುದು ಅವಶ್ಯಕವಾಗಿದೆ. ಶಿಕ್ಷಣ, ಆರೋಗ್ಯ ಮತ್ತು ನ್ಯಾಯ ಈ ಮೂರನ್ನು ಬಿಟ್ಟು ಯಾವುದನ್ನು ಉಚಿತ ಪಡೆಯಬಾರದು. ಉಳಿದ ಎಲ್ಲವನ್ನು ನಾವು ಗಳಿಸಬೇಕಾದರೆ ಯೊಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾಗಿದೆ. ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ತನ್ನದೆ ಹೆಸರು ಮಾಡುತ್ತಿದೆ. ಭಾರತವನ್ನು ಅಭಿವೃದ್ದಿ ಹೊಂದುತ್ತಿರುವ ದೇಶ ಎಂದು ಕರೆಯಲಾಗುತ್ತಿದೆ. ಭಾರತ ಆದಷ್ಟು ಬೇಗ ಅಭಿವೃದ್ದಿ ಹೊಂದಿದ ದೇಶ ಆಗಲಿ ಎಂಬುವುದು ನನ್ನ ಆಶಯ ಎಂದರು.

ಮತದಾನ ಕೇವಲ ನಮ್ಮ ಹಕ್ಕು ಅಲ್ಲ, ಮತದಾನ ಮಾಡುವುದು ನಮ್ಮ ಕರ್ತವ್ಯ. ಹಕ್ಕು ಅಂತಾ ಭಾವಿಸಿ ಅನೇಕರು ಮತದಾನ ಮಾಡುತ್ತಿಲ್ಲ. ಆದರೆ ಹಕ್ಕು ಎನ್ನುವುದರ ಬದಲಾಗಿ ಕರ್ತವ್ಯ ಎಂಬುವುದನ್ನು ಅರಿತು ಮತದಾನ ಮಾಡಬೇಕಿದೆ ಎಂದರು.

ವಿಸ್ಮಯ ನ್ಯೂಸ್, ಕಾರವಾರ

Exit mobile version