ಬಚ್ಚಲಮನೆಯಲ್ಲಿ ಇತ್ತು ಕಾಳಿಂಗ ಸರ್ಪ: ಬೃಹತ್ ಹಾವನ್ನು ನೋಡಿ ಮನೆಯವರು ಕಂಗಾಲು

ಕುಮಟಾ: ಬಚ್ಚಲು ಮನೆಯಲ್ಲಿ ಅವಿತುಕೊಂಡಿದ್ದ ಬೃಹತ್ ಕಾಳಿಂಗ ಸರ್ಪವೊಂದನ್ನು ರಕ್ಷಿಸಿ ಕಾಡಿಗೆ ಬಿಟ್ಟ ಘಟನೆ ಕುಮಟಾ ತಾಲೂಕಿನ ಉಳ್ಳೂರಮಠದಲ್ಲಿ ನಡೆದಿದೆ.ಕಾಡಿನಿಂದ ಆಹಾರ ಅರಸುತ್ತ ನಾಡಿಗೆ ನುಗ್ಗಿದ ಸುಮಾರು 14 ಅಡಿ ಉದ್ದದ 9 ಕೆಜಿ ತೂಕದ ಕಾಳಿಂಗ ಸರ್ಪವೊಂದು ತಾಲೂಕಿನ ಉಳ್ಳೂರಮಠದ ಮನೆಯೊಂದರ ಬಚ್ಚಲುಮನೆಯಲ್ಲಿ ಸೇರಿಕೊಂಡಿತ್ತು. ಈ ವೇಳೆ ಬಚ್ಚಲು ಮನೆಗೆ ತೆರಳಿದ ಮನೆಯವರು ಹೆಡೆ ಎತ್ತಿ ನಿಂತಿದ್ದ ಕಾಳಿಂಗ ಸರ್ಪವನ್ನು ಕಂಡು ಹೌಹಾರಿದ್ದಾರೆ.  ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಬಳಿಕ ಉರಗತಜ್ಞ ಪವನ ನಾಯ್ಕ ಅವರೊಂದಿಗೆ ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯಧಿಕಾರಿಗಳು ಹಾವನ್ನು ನೋಡಿದಾಗ ಅದು ಕಾಳಿಂಗ ಸರ್ಪ ಎಂಬುದು ಗೊತ್ತಾಗಿದೆ. ಬಳಿಕ ಪವನ ನಾಯ್ಕ  ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಅದನ್ನು ರಕ್ಷಣೆ ಮಾಡಿದರು. ಬಳಿಕ ಅಲ್ಲಿ ಸೇರಿದ್ದ ಜನರಿಗೆ ಕಾಳಿಂಗ ಸರ್ಪದ ಬಗ್ಗೆ ಮಾಹಿತಿ ನೀಡುತ್ತ ಕಾಳಿಂಗ ಸರ್ಪಗಳು ಕರ್ನಾಟಕದಲ್ಲಿ ಪಶ್ಚಿಮ ಘಟ್ಟದಲ್ಲಿ ಮಾತ್ರ ಕಂಡು ಬರುತ್ತವೆ. ಇವುಗಳು ಇತರೆ ಸಣ್ಣ ಹಾವುಗಳನ್ನೇ ತಮ್ಮ ಆಹಾರವನ್ನಾಗಿ ಬಳಸುತ್ತವೆ. ಹೀಗಾಗಿ ತೋಟ, ಗದ್ದೆಯಲ್ಲಿ ಕಂಡು ಬರುವ ಕೆಲವು ವಿಷಕಾರಿ ಹಾವುಗಳನ್ನು ಇವು ಬೇಟೆಯಾಡುವುದರಿಂದ ಇವು ಮನುಷ್ಯನಿಗೂ ನೆರವಾಗುತ್ತವೆ.

ಈ ಕುರಿತ ವಿಡಿಯೋ ಇಲ್ಲಿದೆ

ಕಾಳಿಂಗ ಸರ್ಪದಿಂದ ಮನುಷ್ಯರಿಗೆ ಯಾವುದೇ ಭಯವಿಲ್ಲ. ಹೀಗಿರುವಾಗ ಅವುಗಳನ್ನು ಹೊಡೆಯದೇ ತಕ್ಷಣ ಅರಣ್ಯ ಇಲಖೆ ಅಧಿಕಾರಿಗಳಿಗೆ ಮಾಹಿತಿ ನಿಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಬಳಿಕ ರಕ್ಷಿಸಿದ ಕಾಳಿಂಗ ಸರ್ಪವನ್ನು ಜನವಸತಿ ಇಲ್ಲದಿರುವ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು. 

ವಿಸ್ಮಯ ನ್ಯೂಸ್, ಕುಮಟಾ

Exit mobile version