Follow Us On

Google News
Important
Trending

ಬಸ್ ನಿಲ್ದಾಣದ ಕರ್ಮ ಕಾಂಡ: ಬಾಯ್ತೆರೆದು ಕೂತ ಕಬ್ಬಿಣದ ಪಟ್ಟಿಗಳಿಂದ ಪ್ರಾಣಾಪಾಯದ ಸಾಧ್ಯತೆ: ಸ್ವಾತಂತ್ರ್ಯೋತ್ಸವ ದಿನದಂದೇ ಉಗ್ರ ಪ್ರತಿಭಟನೆ ಎಚ್ಚರಿಕೆ ? 

ಅಂಕೋಲಾ: ಪಟ್ಟಣದ ಬಸ್ ನಿಲ್ದಾಣದಿಂದ  ಹೊರ ಹೋಗುವ ದ್ವಾರದಲ್ಲಿ ಕ್ಯಾಟಲ್ ರ್ಯಾಕ್ ಮಾದರಿಯಲ್ಲಿ ಅಳವಡಿಸಿರುವ ಕಬ್ಬಿಣದ ಪಟ್ಟಿಗಳು ಸಡಿಲಗೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಬಸ್ ನಿಲ್ದಾಣದ ಪ್ರವೇಶ ದ್ವಾರ ಮತ್ತು ನಿರ್ಗಮನ ಗೇಟ್ ಬಳಿ ಗುಣಮಟ್ಟದ ಕೊರತೆ ಮತ್ತು ಅವೈಜ್ಞಾನಿಕ ಜೋಡಣೆಯಿಂದ ಕಬ್ಬಿಣದ ಪಟ್ಟಿಗಳು ಪದೇ ಪದೇ ಸಡಿಲಗೊಳ್ಳುವುದು, ಮುರಿದು ಹೋಗುವುದು ನಡೆಯುತ್ತಲೇ ಇದ್ದು ಇದರಿಂದ  ಬಸ್ ಮತ್ತಿತರ ವಾಹನ ಚಾಲಕರು, ನಿಲ್ದಾಣಕ್ಕೆ ಬಂದು ಹೋಗುವ ಪ್ರಯಾಣಿಕರಿಗೆ ತೀವೃ ತೊಂದರೆಯಾಗುತ್ತಿದ್ದು, ಇದು ಹಲವಾರ ಪಾಲಿಗೆ ಎಂದೂ   ಮುಗಿಯದ  ಸಮಸ್ಯೆಯಾಗಿ ಕಾಡತೊಡಗಿದೆ.

ಲಕ್ಷಾಂತರ ಮೌಲ್ಯದ ಅಕ್ರಮ ಸಾಗವಾನಿ ಕಟ್ಟಿಗೆ ದಾಸ್ತಾನು; ವುಡ್ ಮಿಲ್ ಗೆ ಬಿತ್ತು ಬೀಗ ಮುದ್ರೆ| ಮಿಲ್ ಮಾಲಕ ಮತ್ತಿತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲು

ನೂತನ ಬಸ್ ನಿಲ್ದಾಣ  ಆರಂಭವಾದ ಒಂದು ವಾರದಿಂದ ಮತ್ತು  ತದನಂತರ ಈ ವರೆಗೆ ಹತ್ತಾರು ಬಾರಿ ಇಲ್ಲಿನ ಅವ್ಯವಸ್ಥೆ ಬಗ್ಗೆ ಸಾರ್ವಜನಿಕ ವಲಯದಿಂದ ದೂರುಗಳು ಕೇಳಿ ಬರುತ್ತಲೇ ಇದೆ.ಬಸ್ ನಿಲ್ದಾಣದ ದ್ವಾರದಾಟಿ ದನ ಕರುಗಳು ಒಳ ಆವರಣಕ್ಕೆ  ಬರದಂತೆ ತಡೆಯಲು,ಮತ್ತು ಬಸ್ ನಿಲ್ದಾಣದ ಆವರಣದಲ್ಲಿ ನ ಮಳೆಗಾಲದ  ನೀರು  ತಳಮಟ್ಟದಿಂದ ಹರಿದು ಪುರಸಭೆ ವ್ಯಾಪ್ತಿಯ ಗಟಾರ ಸೇರುವಂತೆ ಮಾಡಲು ಕಬ್ಬಿಣದ ಗ್ರಿಲ್ಸ್ ಗಳನ್ನು ಅಳವಡಿಸಲಾಗಿತ್ತು. ಕಳಪೆ ಮಟ್ಟದಂತೆ ಕಂಡು ಬರುವ ಇವು  ಅಳವಡಿಸಿದ ಕೆಲವೇ ದಿನಗಳಲ್ಲಿ  ಮುರಿದು ತುಂಡಾಗಿ ಬಿದ್ದು ಕಾಮಗಾರಿಯನ್ನು ಅಣುಕಿಸುವಂತಿತ್ತು. ಈ ಕುರಿತು ಸಾರ್ವಜನಿಕರು ದೂರಿದ್ದು ಸುದ್ದಿ ಮಾಧ್ಯಮಗಳಲ್ಲಿ ಭಿತ್ತರಗೊಂಡಾಗ ಕೆ. ಎಸ್.ಆರ್ ಟಿ ಸಿ ಅಧಿಕಾರಿಗಳು   ತುರ್ತು ರಿಪೇರಿ ಕೈಗೊಂಡು ಕೈ ತೊಳೆದುಕೊಂಡಿದ್ದರು. 

ಕೆಲ ದಿನಗಳ ಮಟ್ಟಿಗೆ ವ್ಯವಸ್ಥೆ ಸರಿ ಹೋಯಿತಾದರೂ ಮತ್ತೆ ಮತ್ತೆ ಪಟ್ಟಿಗಳು ಸಡಿಲಗೊಂಡು ಅದೇ ದೋಷ ಮರುಕಳಿಸಲಾರಂಭಿಸಿತ್ತು. ಈ ವೇಳೆ ಸಾರ್ವಜನಿಕರ ಪರವಾಗಿ ಗಟ್ಟಿ ಧ್ವನಿ ಎತ್ತಿದ ವಕೀಲ ಉಮೇಶ್ ನಾಯ್ಕ,ಸಾರಿಗೆ ಸಂಸ್ಥೆ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು. ಇದರ ಬಿಸಿ ತಾಗಿದಂತೆ ಎಚ್ಚೆತ್ತುಕೊಂಡ ಇಲಾಖೆ  ಬಸ್ ನಿಲ್ದಾಣದ ಪ್ರವೇಶ ದ್ವಾರದ ಕ್ಯಾಟಲ್‌  ರ್ಯಾಕ್ ನ ದೊಡ್ಡ ದೊಡ್ಡ ಕಬ್ಬಿಣ ಪಟ್ಟಿಗಳ ಮಧ್ಯೆ ಅಡ್ಡಪಟ್ಟಿ ಸೇರಿಸಿ ವೆಲ್ಡಿಂಗ್ ಮಾಡಿ ದುರಸ್ತಿ ಕಾರ್ಯ ಕೈಗೊಂಡದ್ದರಿಂದ ತಕ್ಕ ಮಟ್ಟಿಗೆ ವ್ಯವಸ್ಥೆ ಸುಧಾರಿಸಿದಂತೆ ಕಂಡು ಬಂದಿತ್ತು.

ಆದರೆ ನಿರ್ಗಮನ ದ್ವಾರದ ಬಳಿ ಸುಧಾರಣೆಗೆ ಹೆಚ್ಚಿನ ಒತ್ತು ನೀಡದಿರುವುದರಿಂದ ಅಲ್ಲಿಯೂ ಕಬ್ಬಿಣದ ಪಟ್ಟಿಗಳು ಸಡಿಲಗೊಂಡು ಅಪಾಯಕ್ಕೆ ಆಹ್ವಾನ  ನೀಡುತ್ತಾ  ಬಾಯ್ತೆರೆದು ಕೂತಂತಿದೆ. ಹತ್ತಾರು ಬಾರಿ ರಿಪೇರಿ ಮಾಡಿ ಯಾರೆಲ್ಲ ಎಷ್ಟು ನುಂಗಿದರೋ ಗೊತ್ತಿಲ್ಲ ಆದರೆ ಈ ಬಾರಿ ಹೊರ ದ್ವಾರದ ಬಳಿ ಉಂಟಾಗಿರುವ ಕಬ್ಬಿಣ ಪಟ್ಟಿಗಳ ನಡುವಿನ ಸಡಿಲಿಕೆ ಅಂತರ ಹೆಚ್ಚುತ್ತಲೇ ಇದ್ದು ಯಾರದಾದರೂ ಕಾಲು ಇಲ್ಲವೇ ಪ್ರಾಣ ನುಂಗುವುದು ಗ್ಯಾರಂಟೀ ಎನ್ನುತ್ತಾರೆ ಕೆಲ ಸ್ಥಳೀಯರು ಸಾರಿಗೆ ಸಂಸ್ಥೆಯ ನಿರ್ಲಕ್ಷದಿಂದ ಪ್ರಯಾಣಿಕರು, ವಾಹನ ಚಾಲಕರು ಮತ್ತಿತರರು ನಾನಾ ರೀತಿಯಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ವೃದ್ಧರು, ಮಕ್ಕಳು, ಸೈಕಲ್ ಹಾಗೂ  ದ್ವಿಚಕ್ರವಾಹನ ಸವಾರರು ಸೇರಿದಂತೆ ಇತರೆ ಕೆಲವರು ಆಗಾಗ ಇಲ್ಲಿ ಆಯ ತಪ್ಪಿ ಕಬ್ಬಿಣ ಪಟ್ಟಿಯ ನಡುವೆ ಕಾಲು ಸಿಲುಕಿಸಿ ಕೊಳ್ಳುವುದು, ಮಳೆ ನೀರು ನಿಲ್ಲುವುದರಿಂದಲೂ  ಅಂದಾಜಿಸಲಾದೇ ಬೀಳುವುದು  ಏಳುವುದು ಮಾಡುತ್ತಿರುವ ಹತ್ತಾರು ಘಟನೆಗಳು ನಡೆಯುತ್ತಲೇ ಇವೆ.

ಸಾರಜನಿಕರಿಗೆ ಜೀವ ಹಾನಿ ಇಲ್ಲವೇ ಇತರೆ ರೀತಿಯ ಅಪಾಯ ಆಗುವ ಮುನ್ನ ಸಂಬಂಧಿಸಿದವರು ಎಚ್ಚೆತ್ತುಕೊಳ್ಳದಿದ್ದರೆ ಸ್ವಾತಂತ್ರ್ಯೋತ್ಸವ ದಿನದಂದೇ,ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎನ್ನುತ್ತಾರೆ ವಕೀಲ ಉಮೇಶ್ ನಾಯ್ಕ,ಸಾಮಾಜಿಕ ಕಾರ್ಯಕರ್ತರಾದ ವಿಜಯಕುಮಾರ್ ನಾಯ್ಕ,ಮಂಜುನಾಥ್ ನಾಯ್ಕ್ ಮತ್ತಿತರರು. ಈಗಲಾದರೂ ಸಂಬಂಧಿಸಿದವರು ಎಚ್ಚೆತ್ತುಕೊಂಡು ವ್ಯವಸ್ಥೆ, ಸರಿಪಡಿಸುವುದರೊಂದಿಗೆ,ಸಮಸ್ಯೆ ಪರಿಹಾರಕ್ಕೆ ಸೂಕ್ತ ಮತ್ತು ಶಾಶ್ವತ ಪರಿಹಾರ ಕಂಡುಹಿಡಿಯವರೇ ಕಾದು ನೋಡಬೇಕಿದೆ?

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button