ಅತ್ಯುತ್ತಮ ಕ್ರೀಡಾಪಟು ಸಾವು: ಇಲಿಜ್ವರದ ಶಂಕೆ

ಅಂಕೋಲಾ: ಅತ್ಯುತ್ತಮ ಕ್ರೀಡಾಪಟುವಾಗಿದ್ದ ಅಂಕೋಲಾ ತಾಲೂಕಿನ ಶಿಂಗನಮಕ್ಕಿಯ ಯುವಕನೋರ್ವ ಅನಾರೋಗ್ಯದಿಂದ ಮೃತಪಟ್ಟಿದ್ದು,ಇಲಿ ಜ್ವರದ ಶಂಕೆ ವ್ಯಕ್ತವಾಗಿದೆ. ಅಂಕೋಲಾ ತಾಲೂಕಿನ ಹೊನ್ನೇ ಬೈಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿಂಗನಮಕ್ಕಿ ಗ್ರಾಮದ 26 ವರ್ಷದ ತರುಣನೋರ್ವ ಅನಾರೋಗ್ಯದಿಂದ ಅಕಾಲಿಕ ಸಾವಿಗೀಡಾಗಿದ್ದು, ಆತನ ಸಾವಿಗೆ ಇಲಿ ಜ್ವರದ ಶಂಕೆ ವ್ಯಕ್ತವಾಗಿದೆ.ಈ ಕುರಿತು ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ ತಿಳಿದು ಬರಬೇಕಿದೆ.

ಹರೀಶ್ ಸುರೇಶ್ ಗೌಡ ಮೃತ ದುರ್ದೈವಿಯಾಗಿದ್ದು,ಅತ್ಯುತ್ತಮ ಕ್ರೀಡಾಪಟುವಾಗಿದ್ದ ಈತ ಉತ್ತಮ ದೇಹಧಾಡ್ಯತೆಯನ್ನು ಹೊಂದಿದ್ದ. ಇತ್ತೀಚೆಗೆ ಆತನಿಗೆ ಆಗಾಗ ಜ್ವರ ಕಾಣಿಸಿಕೊಳ್ಳುತ್ತಿತ್ತು ಎನ್ನಲಾಗಿದ್ದು, ತದನಂತರ ಪಕ್ಕದ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆತ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದು, ಮೃತದೇಹವನ್ನು ಹುಟ್ಟೂರಿಗೆ ತಂದು ಅಂತ್ಯ ಸಂಸ್ಕಾರ ನಡೆಸಲಾಯಿತು. ಮೃತನ ಮನೆಯಲ್ಲಿ ಮತ್ತು ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ, ಬೆಳಂಬಾರ ಗ್ರಾಪಂ ಮಾಜಿ ಅಧ್ಯಕ್ಷ ಮಾದೇವ ಗೌಡ, ತಾಲೂಕಿನ ಅನೇಕ ಕ್ರೀಡಾ ಪಟುಗಳು ಹರೀಶ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version