Focus NewsImportant
Trending

ಕಾಡು ಹಂದಿಯ ಹೆಸರಲ್ಲಿ , ನಾಯಿ & ಸಾಕು ಹಂದಿಯ ಮಾಂಸ ಮಾರಾಟ?: ಅಕ್ರಮವಾಗಿ ಮಾಂಸ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದವರ ಬಂಧನ

ಮಾಂಸದ ರುಚಿ ಸವಿಯುತ್ತಿದ್ದವರಿಗೆ ವಾಕರಿಕೆ ಬಂದ ಅನುಭವ ಯಾಕೆ?

ಅಂಕೋಲಾ: ಒಳ್ಳೆಯ ಮಾಂಸ ಎಂದು ರುಚಿ ಸವಿಯುತ್ತಿದ್ದ ಮಂದಿಗೆ ತಾವು ತಿನ್ನುತ್ತಿರುವುದು ಅದಾವುದೋ ಹಂದಿ ಮಾಸ ಎಂದು  ಮನವರಿಕೆಯಾಗುತ್ತಿದ್ದಂತೆ,ಒಳಗಿಂದ ಒಳಗೆ ವಾಕರಿಕೆ ಬಂದತ ಅನುಭವವಾಗಿ ಮಾಂಸ ಮಾರಾಟಗಾರರನ್ನು ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದ ಘಟನೆಯ  ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.  ಅಂಕೋಲಾ ತಾಲೂಕಿನ ಹೊಸಕಂಬಿ ವಲಯ ಅರಣ್ಯ ವ್ಯಾಪ್ತಿಯ ಮೊಗಟಾದಲ್ಲಿ ಕಾಡು ಹಂದಿ ಬೇಟೆಯಾಡಿ ಕೊಂದ ಮೂವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿ ಹಂದಿ ಮಾಂಸ ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಬಳಲೆಯಲ್ಲಿ ವಾಸವಾಗಿರುವ ರಾಮಪ್ಪ ದುರ್ಗಪ್ಪ ಶಿರಾಳಕೊಪ್ಪ (43) ಮನೋಜ ರಾಮಪ್ಪ ಶಿರಾಳಕೊಪ್ಪ (18) ಮತ್ತು ಹುಬ್ಬಳ್ಳಿ ನಿವಾಸಿ ವಿನೋದ ಗಂಗಪ್ಪ ಚಂದ್ರವಳ್ಳಿ ಬಂಧಿತ ಆರೋಪಿಗಳಾಗಿದ್ದು ಇವರು ಮೊಗಟಾ ಅರಣ್ಯ ವ್ಯಾಪ್ತಿಯಲ್ಲಿ ಕಾಡು ಹಂದಿ ಕೊಂದು ಸಾಗಿಸುತ್ತಿದ್ದ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿರುವ ಕುರಿತು ಪ್ರಕರಣ ದಾಖಲಾಗಿದೆ. 

ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತಕುಮಾರ ಮತ್ತು  ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಅಣ್ಣಯ್ಯ ಗೌಡ ಅವರ ಮಾರ್ಗದರ್ಶನದಲ್ಲಿ ಹೊಸಕಂಬಿ ವಲಯ ಅರಣ್ಯಾಧಿಕಾರಿ ಸುರೇಶ ನಾಯ್ಕ, ಉಪ ವಲಯ ಅರಣ್ಯಾಧಿಕಾರಿ ಸತೀಶ ಕಾಂಬಳೆ, ಸಿ.ಆರ್. ನಾಯ್ಕ, ಪ್ರಶಾಂತ ಪಟಗಾರ, ಅಕ್ಷಯ ಕುಲಕರ್ಣಿ, ಅರಣ್ಯ ಪಾಲಕ ಪುಂಡಲೀಕ ತಾವರಖೇಡ, ಸಾಬು ಶೆಟ್ಟನವರ್,ಬಸವನಗೌಡ ಬಗಲಿ, ನಯನಾ ಗೌಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 

ಸ್ಥಳೀಯ  ಮೂಲಗಳ ಪ್ರಕಾರ ಅಲೆಮಾರಿ ಜನಾಂಗದ ಆರೋಪಿಗಳು ಕಳೆದ ವರ್ಷದಿಂದೀಚೆಗೆ  ಹೊಸಕಂಬಿ ವಲಯ ಅರಣ್ಯ ವ್ಯಾಪ್ತಿಯ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕಾಡು ಹಂದಿ ಬೇಟೆಯಾಡಿ ಮಾಂಸ ಮಾರಾಟ ದಂಧೆಯಲ್ಲಿ ತೊಡಗಿದ್ದು, ಕಾಡು ಹಂದಿ ಮಾಂಸದ ಜೊತೆಗೆ  ಸಾಕು ಹಂದಿ ಮಾಂಸವನ್ನೂ ಮಾರಾಟ ಮಾಡಿ ಜನರನ್ನು ವಂಚಿಸುತ್ತಿದ್ದರು ಎನ್ನಲಾಗಿದೆ. ಸುತ್ತಮುತ್ತಲ ಕೆಲ ಹಳ್ಳಿಗರು ತಾವು ತಿನ್ನುವುದು ಯಾವ ಮಾಂಸ ಎಂಬ ಅರಿವಿದ್ದೋ  ಅರಿವಿಲ್ಲದೆಯೋ  ತಾಜಾ ಮಾಂಸ ಸಿಗುತ್ತಿದೆ ಎಂದು ಹಣಕೊಟ್ಟು ಅದನ್ನು ಕೊಂಡು ರುಚಿ ಸವಿಯುತ್ತಿರುವುದಲ್ಲದೆ,ತಮ್ಮ ಪರಿಚಿತರಿಗೂ ಒಳ್ಳೆ ಮಾಂಸವಿದೆ ಬೇಕಾ ಎನ್ನುತ್ತಾ ಅವರನ್ನು ಕರೆಯಿಸಿ,ಇಲ್ಲವೇ ಇವರೇ ಅವರಿಗೆ ತಲುಪಿಸಿ ಹೇಗಿದೆ ರುಚಿ, ಮಸ್ತ ಇದೆ ಅಲ್ಲಾ ಎಂಬಂತೆ ತಮ್ಮ ಕುರಿತು ತಾವೇ ಹೆಮ್ಮೆಪಟ್ಟುಕೊಳ್ಳುತ್ತಿದ್ದರು,

ಮಾಂಸ  ಮಾರಾಟಗಾರರ ಮೋಸ ಬಯಲಾಗುತ್ತಿದ್ದಂತೆ,ತಾವು ತಿಂದಿದ್ದು ಹಂದಿಯೋ ? ನಾಯಿಯೋ ? ಹಂದಿ ಆದರೆ ಯಾವ ಹಂದಿ ? ಕಾಡು ಹಂದಿಯೇ ಅಥವಾ ಬಿಡಾಡಿ ಬಿಟ್ಟು ಸಾಕಿದ ಹಂದಿಯೇ ಎಂಬಷ್ಟರ ಮಟ್ಟಿಗೆ ತಮ್ಮಲ್ಲಿಯೇ ತಾವು ಚರ್ಚಿಸಿ, ಮಾಂಸ ಮಾರಾಟಗಾರರ ವಿರುದ್ಧ ಆಕ್ರೋಶ ಹೊರಹಾಕಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.ಇನ್ನು ಕೆಲವರು ಅಯ್ಯೋ ಮಾಂಸದ ರುಚಿಗೆ ಮರಳಾಗಿ ಏನೇನೋ ತಿಂದುಬಿಟ್ಟೆವಲ್ಲ ಎಂದು ಒಳಗಿಂದೊಳಗೆ ವಾಕರಿಕೆ ಬಂದವರಂತೆ ವರ್ತಿಸಲಾರಂಭಿಸಿದ್ದಾರೆ ಎನ್ನಲಾಗಿದೆ. 

ಸೋಮವಾರ ಬೆಳಗ್ಗೆ ಸಹ ಕಾಡು ಹಂದಿ ಬೇಟೆಯಾಡಿದ ಆರೋಪಿಗಳು ಜನರನ್ನು ವಂಚಿಸಲು ಅರಣ್ಯ ಪ್ರದೇಶದಲ್ಲಿಯೇ ಹೆಚ್ಚಾಗಿ ಮಾಂಸ ಮಾರಾಟ ಮಾಡುತ್ತಿದ್ದರಿಂದ ಕೆಲವರಷ್ಟೇ ಕದ್ದು ಮುಚ್ಚಿ ಮಾಸ ತರಲು ಹೋಗುತ್ತಿದ್ದರು. ಈ ವೇಳೆ ತಾವು ತರುತ್ತಿರುವುದು ಯಾವ ಮಾಂಸ ಎಂಬ ಅರಿವಿದ್ದೋ ಅರಿವಿಲ್ಲದೆಯೋ ತಂದು ತಿಂದು ಈಗ ತಮ್ಮಷ್ಟಕ್ಕೆ ತಾವು ಹೇಸಿಗೆ ಪಡುವಂತಾಗಿದೆ.

ಈ ಎಲ್ಲ ಘಟನೆಗಳು ಹಲವು ಚರ್ಚೆಗೆ ಕಾರಣವಾಗಿದ್ದು ಒಂದೊಮ್ಮೆ ಬಿಡಾಡಿ ಬಿಟ್ಟ ಸಾಕು ಹಂದಿಯನ್ನೇ ಈ ಹಿಂದೆ ಕೊಂದು ಮಾರಾಟ ಮಾಡುತ್ತಿದ್ದರೆ ? ಸುತ್ತಮುತ್ತಲಿನ ಕೆಲ ಜನರು ಹಾಗೂ ಅಂಕೋಲಾದ ಕೆಲವರು ಸಹ ಅದನ್ನೇ ತಿಂದರೆ ? ಇಲ್ಲವೇ ಕಾಡು ಹಂದಿಗಳನ್ನೇ ಇಲ್ಲವೇ ಇತರೆ ಕಾಡು ಪ್ರಾಣಿಗಳನ್ನೇ ಕೊಂದು, ಮಾಂಸ ಮಾರಾಟ ಮಾಡುತ್ತಿದ್ದರು ಎಂದರೆ ಮಾರಾಟ ಮಾಡಿದವರ ಯಾರು? ತಿಂದವರಾರು? ಅಷ್ಟೆಲ್ಲ ಕಾಡು ಪ್ರಾಣಿಗಳ ಸಂತತಿ ನಾಶಪಡಿಸಿದರೂ ಸಂಬಂಧಿತ ಅರಣ್ಯ ಇಲಾಖೆ ಗಮನಕ್ಕೆ ಬಂದಿರಲಿಲ್ಲವೆ? ಅಥವಾ ಇಲಾಖೆಯ ಕೆಲವರು ಇ ಮೋಸ ಮಾರಾಟ ದಂಧೆಯಲ್ಲಿ ಶಾಮಿಲಾಗಿದ್ದರೆ ಎನ್ನುವ ಸಂಶಯದ ಮಾತುಗಳು ಅಲ್ಲಲ್ಲಿ ಕೇಳಿ ಬಂದಿದ್ದು ಸಂಬಂಧಿಸಿದವರೇ ಉತ್ತರಿಸಬೇಕಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button