Big News
Trending

ಸಂರಕ್ಷಿಸಿದ ಕಡಲಾಮೆ ಮೊಟ್ಟೆಗಳಿಂದ ಹೊರ ಬಂದ ಮರಿಗಳು: 50 ಕ್ಕೂ ಹೆಚ್ಚು ಮರಿಗಳನ್ನು ಸಮುದ್ರಕ್ಕೆ ಬಿಟ್ಟ ಅರಣ್ಯ ಇಲಾಖೆ

ಕಾರವಾರ: ಕಡಲಾಮೆಗಳು ಪರಿಸರ ಸ್ನೇಹಿ ಜೀವಿಗಳಾಗಿದ್ದು ಇತ್ತೀಚಿನ ದಿನಗಳಲ್ಲಿ ಅವುಗಳು ಅಳಿವಿನ ಅಂಚಿನಲ್ಲಿರುವ ಪ್ರಭೇದಗಳ ಸಾಲಿಗೆ ಸೇರಿವೆ. ಅವುಗಳ ಸಂತತಿಯನ್ನಉ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಅರಣ್ಯ ಇಲಾಖೆ ಆಮೆಯ ಮೊಟ್ಟೆಗಳನ್ನು ಸಂರಕ್ಷಿಸುವ ಕೆಲಸವನ್ನು ಆರಂಭಿಸಿದೆ. ಹೀಗೆ ಸಂರಕ್ಷಿಸಲಾಗಿದ್ದ ಮೊಟ್ಟೆಗಳು ಇದೀಗ ಮರಿಗಳಾಗಿ ಹೊರಬಂದಿದ್ದು ಅವುಗಳನ್ನು ಇಂದು ಸಮುದ್ರಕ್ಕೆ ಸೇರಿಸುವ ಕಾರ್ಯವನ್ನು ಮಾಡಲಾಯಿತು.

ಪುಟ್ಟ, ಪುಟ್ಟ ಹೆಜ್ಜೆಗಳನ್ನಿಡುತ್ತಾ ಸಮುದ್ರದತ್ತ ತೆರಳುತ್ತಿರುವ ಆಮೆಯ ಮರಿಗಳು. ದಡದಲ್ಲಿಡಲಾಗಿದ್ದ ಮೊಟ್ಟೆಯಿಂದ ಹೊರಬಂದ ಆಮೆಯ ಮರಿಗಳನ್ನ ಸುರಕ್ಷಿತವಾಗಿ ತಂದು ಬಿಡುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು. ಈ ಪುಟಾಣಿ ಕಡಲಜೀವಿಗಳನ್ನ ನೋಡೋದಕ್ಕೆ ಕುತೂಹಲದಿಂದ ಸುತ್ತುವರೆದಿರುವ ಸಾರ್ವಜನಿಕರು ಹಾಗೂ ಪ್ರವಾಸಿಗರು. ಅರೇ ಇಷ್ಟೊಂದು ಮುದ್ದಾದ ಆಮೆಯ ಮರಿಗಳು ಕಂಡುಬoದಿದ್ದು ಎಲ್ಲಿ ಅಂತೀರಾ. ಈ ಎಲ್ಲ ದೃಶ್ಯಗಳು ಕಂಡುಬoದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ದೇವಭಾಗ್ ಕಡಲತೀರದಲ್ಲಿ.

ಇದೇ ಮೊದಲಬಾರಿಗೆ ಅರಣ್ಯ ಇಲಾಖೆ ವತಿಯಿಂದ ದೇವಭಾಗ್ ಕಡಲತೀರದಲ್ಲಿ ಆಲಿವ್ ರಿಡ್ಲೇ ಪ್ರಭೇದದ ಆಮೆಯ ಮೊಟ್ಟೆಗಳನ್ನ ಸಂರಕ್ಷಿಸಿಡಲಾಗಿದ್ದು ಇಂದು ಆ ಮೊಟ್ಟೆಗಳು ಮರಿಗಳಾಗಿ ಹೊರಬಂದಿವೆ. ಈ ನಿಟ್ಟಿನಲ್ಲಿ ಸಂರಕ್ಷಿಸಲ್ಪಟ್ಟ ಆಮೆಯ ಮರಿಗಳನ್ನ ಸುರಕ್ಷಿತವಾಗಿ ಸಮುದ್ರಕ್ಕೆ ಸೇರಿಸುವ ಕೆಲಸವನ್ನ ಅರಣ್ಯ ಇಲಾಖೆ ಮಾಡಿದೆ. ದೇವಭಾಗ್ ಕಡಲತೀರದಲ್ಲಿ ಕಳೆದ ಜನವರಿಯಲ್ಲಿ ಆಲಿವ್ ರಿಡ್ಲೇ ಕಡಲಾಮೆ ಒಟ್ಟೂ 26 ಕಡೆ ಮೊಟ್ಟೆಗಳನ್ನ ಇಟ್ಟಿದ್ದು ಎಲ್ಲವನ್ನೂ ಅರಣ್ಯ ಇಲಾಖೆ ಗೇಜ್ ಗಳನ್ನ ಹಾಕಿ ಸಂರಕ್ಷಿಸಿ ಇಟ್ಟಿದ್ದರು. ಇಂದು ಸುಮಾರು 42 ಆಮೆಮರಿಗಳು ಮೊಟ್ಟೆ ಒಡೆದು ಹೊರ ಬಂದಿದ್ದು ಅವುಗಳನ್ನ ಸಮುದ್ರಕ್ಕೆ ಬಿಡಲಾಯಿತು.

ಇನ್ನು ಕಡಲಾಮೆಗಳಲ್ಲಿ 7 ಪ್ರಭೇದಗಳಿದ್ದು ರಾಜ್ಯದ ಕಡಲತೀರದಲ್ಲಿ 3 ಬಗೆಯ ಕಡಲಾಮೆಗಳನ್ನ ಗುರುತಿಸಲಾಗಿದೆ. ಅವುಗಳಲ್ಲಿ ಆಲಿವ್ ರಿಡ್ಲೇ ಕಡಲಾಮೆ ಮಾತ್ರ ಕಡಲತೀರದಲ್ಲಿ ಮೊಟ್ಟೆ ಇಡುವ ಪ್ರಭೇದವಾಗಿದೆ. ಕಡಲಾಮೆಗಳ ಸಂತತಿ ಅಳಿವಿನ ಅಂಚಿನಲ್ಲಿರುವ ಕಾರಣದಿಂದ ಜಿಲ್ಲೆಯ ಅರಣ್ಯ ಇಲಾಖೆ ಅವುಗಳ ರಕ್ಷಣೆಗೆ ಕೋಸ್ಟಲ್ ಮರೈನ್ ಎಂಡ್ ಇಕೋ ಸಿಸ್ಟಮ್ ಎನ್ನುವ ವಿಭಾಗವನ್ನ ರೂಪಿಸಿದೆ. ಇದರಡಿಯಲ್ಲಿ ಈಗಾಗಲೇ ಕಾರವಾರ ವಿಭಾಗದ ದೇವಭಾಗ್ ವಿಭಾಗದಲ್ಲಿ ಸುಮಾರು 26 ಕಡೆ ಕಡಲಾಮೆಗಳು ಮೊಟ್ಟೆಯನ್ನ ಇಟ್ಟಿದ್ದು 1,500ಕ್ಕೂ ಅಧಿಕ ಆಮೆಯ ಮೊಟ್ಟೆಗಳನ್ನ ಸಂರಕ್ಷಿಸಲಾಗಿದೆ.

ಅಲ್ಲದೇ ಆಮೆಯ ಗೂಡುಗಳ ಕುರಿತು ಮಾಹಿತಿ ನೀಡುವ ಸಾರ್ವಜನಿಕರಿಗೆ ಒಂದು ಸಾವಿರ ರೂಪಾಯಿ ಸಹಾಯಧನ ನೀಡುತ್ತಿದ್ದು ಇದರಿಂದ ಸಾರ್ವಜನಿಕರಿಂದಲೂ ಇದೀಗ ಕಡಲಾಮೆ ಸಂತತಿ ರಕ್ಷಣೆಗೆ ಸಹಕಾರಿಯಾಗಿದೆ. ಇನ್ನು ಕಡಲಾಮೆಗಳು ಕಡಲ ಪರಿಸರದ ಸಮತೋಲನ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಅವುಗಳ ರಕ್ಷಣೆ ಅತ್ಯಗತ್ಯವಾಗಿದೆ. ಹೀಗೆ ಸಂರಕ್ಷಿಸಲ್ಪಟ್ಟ ಆಮೆಯ ಮೊಟ್ಟೆಗಳಿಂದ ಹೊರಬಂದ ಮರಿಗಳನ್ನ ಕಾರವಾರದಲ್ಲಿ ಇದೇ ಮೊದಲ ಬಾರಿಗೆ ಸಮುದ್ರಕ್ಕೆ ಬಿಟ್ಟಿದ್ದರಿಂದ ಹಲವು ಅಧಿಕಾರಿಗಳು ಸಾರ್ವಜನಿಕರು ಹಾಗೂ ಪ್ರವಾಸಿಗರು ಸಹ ಆಗಮಿಸಿದ್ದು ಆಮೆಯ ಮರಿಗಳು ಸಮುದ್ರದತ್ತ ಹೆಜ್ಜೆ ಹಾಕುವುದನ್ನ ನೋಡಿ ಸಂತಸಪಟ್ಟರು.

ಒಟ್ಟಾರೇ ಅಳಿವಿನ ಅಂಚಿನಲ್ಲಿರುವ ಕಡಲಾಮೆ ಸಂತತಿಯನ್ನ ರಕ್ಷಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕೈಗೊಂಡಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಸಾರ್ವಜನಿಕರೂ ಸಹ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿದಲ್ಲಿ ಕಡಲಾಮೆ ಸಂತತಿ ಅಭಿವೃದ್ಧಿಗೆ ಸಹಕಾರಿಯಾಗೋದ್ರಲ್ಲಿ ಅನುಮಾನವಿಲ್ಲ.

ವಿಸ್ಮಯ ನ್ಯೂಸ್, ಕಾರವಾರ

Back to top button