ಕೊನೆಗೂ ಸಿಕ್ಕಿಬಿದ್ದ ಕಳ್ಳರು: ಇವರು ಏನು ಮಾಡುತ್ತಿದ್ದರು ನೋಡಿ

ಅಂಕೋಲಾ: ಇತ್ತೀಚೆಗೆ ನಡೆದ ಪಟ್ಟಣದ ಹುಲಿದೇವರ ವಾಡ ವ್ಯಾಪ್ತಿಯ ಪೆಟ್ರೋಲ್ ಪಂಪ್ ಬಳಿಯ ಟಿವಿ ಕೇಬಲ್ ನೆಟ್‍ವರ್ಕ್‍ನ ಕಚೇರಿ ಮತ್ತು ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ ಘಟನೆ ಶನಿವಾರ ನಡೆದಿದೆ.

ಬಂಧಿತರೆಲ್ಲರೂ 25 ವರ್ಷ ಒಳಗಿನವರಾಗಿದ್ದು, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನವನಗರ ನಿವಾಸಿಗಳಾಗಿದ್ದಾರೆ. ಆರೋಪಿಗಳ ಪೈಕಿ ಓರ್ವ ಗೌಂಡಿ, ಇನ್ನೊರ್ವ ಗ್ಯಾರೇಜ್ ವೆಲ್ಡಿಂಗ್ ಕೆಲಸ, ಮತ್ತೋರ್ವ ಬಟ್ಟೆ ವ್ಯಾಪಾರಿ ಹಾಗೂ ಚಾಲಕ ವೃತ್ತಿ ಮಾಡಿಕೊಂಡಿದ್ದರು ಎನ್ನಲಾಗಿದೆ,

ಬಂಧಿತರಿಂದ 20500 ನಗದು, ಫೈರ್ ಹೋಲ್ ಮಷೀನ್, ಜಿಯೋ ವೈಪೈ ಮತ್ತು ಕಳ್ಳತನಕ್ಕೆ ಬಳಸಿದ ಹುಂಡೈ ಐ20 ಕಾರ್ ಸೇರಿದಂತೆ ಒಟ್ಟಾರೆ 3,72,100 ಅಂದಾಜು ಮೌಲ್ಯದ ಸ್ವತ್ತನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಆರೋಪಿಗಳು ಈ ಹಿಂದಿನಿಂದಲೂ ಇಂತಹ ಅನೇಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರ ತನಿಕೆಯಿಂದ ಹೆಚ್ಚಿನ ಮಾಹಿತಿ ದೊರೆಯಬೇಕಿದೆ.

ಕಳ್ಳರನ್ನು ಬಂಧಿಸಿದ ಪಿಎಸ್‍ಐ ಈ.ಸಿ.ಸಂಪತ್ ಮತ್ತು ಸಿಬ್ಬಂದಿಗಳ ಕರ್ತವ್ಯವನ್ನು ಶ್ಲಾಘೀಸಿರುವ ಪೊಲೀಸ ಅಧೀಕ್ಷಕ ಶಿವಪ್ರಕಾಶ ದೇವರಾಜು ಬಹುಮಾನ ಘೋಷಿಸಿದ್ದಾರೆ. ಇತ್ತೀಚೆಗೆ ಅಂಕೋಲಾದಲ್ಲಿ ಅನೇಕ ಕಳ್ಳತನ ಪ್ರಕರಣಗಳು ನಡೆದಿದ್ದು, ಕೆಲವು ಮಾತ್ರ ಪೊಲೀಸ ಠಾಣೆಯಲ್ಲಿ ದಾಖಲಾಗಿದೆ ಎನ್ನಲಾಗಿದೆ.

ಶೆಟಗೇರಿಯಲ್ಲಿ ನಡೆದ ಎಲ್‍ಐಸಿ ಅಧಿಕಾರಿ ಮನೆ ಕಳ್ಳತನ, ಬೆಳಸೆ ಮನೆ ಕಳ್ಳತನ, ದೇವಸ್ಥಾ ನಗಳ ಕಳ್ಳತನಕ್ಕೆ ಸಂಬಂಧಿಸಿದ ಆರೋಪಿಗಳನ್ನು ಪತ್ತೆ ಹಚ್ಚಿ, ಇಲಾಖೆ ತನ್ನ ಕಾರ್ಯಕ್ಷಮತೆಯನ್ನು ಪ್ರದರ್ಶಿಸಬೇಕೆನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version