
ಕಾರವಾರ: ಮಹಾರಾಷ್ಟ್ರದ ಎಫ್ಡಿಎ ಅಧಿಕಾರಿಗಳು ಅಡಿಕೆ ಲಾರಿಗಳನ್ನು ಅಕಾರಣವಾಗಿ ತಡೆಹಿಡಿದಿರುವ ಘಟನೆ ಇದೀಗ ಉತ್ತರಕನ್ನಡದ ‘ಅಡಿಕೆ’ಯ ಭವಿಷ್ಯದ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟಾ ಹಾಗೂ ಹೊನ್ನಾವರ ಭಾಗದ ಆರ್ಥಿಕತೆಯ ಬೆನ್ನೆಲುಬಾಗಿರುವ ಅಡಿಕೆ ಕೃಷಿಯ ಮೇಲೆ ಈ ಬೆಳವಣಿಗೆ ಆಘಾತವನ್ನು ತರುವಂತೆ ಮಾಡಿದೆ.
ಮೂಲಗಳ ಪ್ರಕಾರ, ಈಗಾಗಲೇ ಬರೋಬ್ಬರಿ 50 ಕ್ಕೂ ಹೆಚ್ಚು ಅಡಿಕೆ ಲಾರಿಗಳು ಮಹಾರಾಷ್ಟ್ರದ ವಿವಿಧೆಡೆ ಸಿಲುಕಿಕೊಂಡಿವೆ. “ನಾವು ಮಹಾರಾಷ್ಟ್ರದಲ್ಲಿ ಅಡಿಕೆ ಮಾರಾಟ ಮಾಡುತ್ತಿಲ್ಲ, ಕೇವಲ ಆ ರಾಜ್ಯದ ಮುಖಾಂತರ ಬೇರೆ ರಾಜ್ಯಗಳಿಗೆ ಸಾಗಾಟ ಮಾಡುತ್ತಿದ್ದೇವೆ. ಅಲ್ಲದೆ, ಅಡಿಕೆಯು ಯಾವುದೇ ನಿಷೇಧಿತ ವಸ್ತುವಲ್ಲ; ಇದು ಗುಟ್ಕಾ, ಪಾನ್ ಮಸಾಲಾ ಅಥವಾ ತಂಬಾಕು ಉತ್ಪನ್ನಗಳ ವರ್ಗಕ್ಕೂ ಸೇರುವುದಿಲ್ಲ. ಹೀಗಿದ್ದರೂ ಅಧಿಕಾರಿಗಳು ಕಾನೂನುಬಾಹಿರವಾಗಿ ಲಾರಿಗಳನ್ನು ಜಪ್ತಿ ಮಾಡುತ್ತಿದ್ದಾರೆ” ಎಂಬುದು ಅಡಿಕೆ ವ್ಯಾಪಾರಿಗಳ ನೇರ ಆರೋಪವಾಗಿದೆ.
ವ್ಯಾಪಾರ ವಹಿವಾಟಿನ ಮೇಲೆ ನೇರ ಪರಿಣಾಮ
ಉತ್ತರ ಕನ್ನಡ ಜಿಲ್ಲೆ ರಾಜ್ಯದ ಪ್ರಮುಖ ಅಡಿಕೆ ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿದೆ. ಕುಮಟಾ, ಹೊನ್ನಾವರ, ಸಿರ್ಸಿ, ಸಿದ್ದಾಪುರ, ಯಲ್ಲಾಪುರ ಸೇರಿದಂತೆ ವಿವಿಧ ಭಾಗಗಳ ಸಾವಿರಾರು ರೈತರು ಅಡಿಕೆ ಬೆಳೆಯನ್ನೇ ತಮ್ಮ ಮುಖ್ಯ ಜೀವನೋಪಾಯವನ್ನಾಗಿ ಅವಲಂಬಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಅಡಿಕೆ ಸಾಗಾಟಕ್ಕೆ ಅಡ್ಡಿಯಾಗುತ್ತಿರುವ ಬೆಳವಣಿಗೆ ಮುಂದುವರಿದರೆ ಅಡಿಕೆಯ ಬೇಡಿಕೆ ಮತ್ತು ವ್ಯಾಪಾರ ವಹಿವಾಟಿನ ಮೇಲೆ ನೇರ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.
ವ್ಯಾಪಾರಿಗಳ ಪ್ರಕಾರ, ಹೊರ ರಾಜ್ಯಗಳಿಗೆ ಅಡಿಕೆ ಸಾಗಾಟ ಸ್ಥಗಿತಗೊಂಡರೆ ಮಾರುಕಟ್ಟೆಯಲ್ಲಿ ಅಡಿಕೆ ದಾಸ್ತಾನು ಹೆಚ್ಚಾಗುವ ಸಾಧ್ಯತೆಯಿದ್ದು, ಇದರಿಂದ ಅಡಿಕೆ ಬೆಲೆ ಕುಸಿತವಾಗುವ ಅಪಾಯವಿದೆ. ಬೆಲೆ ಇಳಿಕೆಯಾದರೆ ರೈತರಿಗೆ ಸೂಕ್ತ ಬೆಲೆ ಸಿಗದೆ ಆರ್ಥಿಕ ಸಂಕಷ್ಟ ಎದುರಾಗಬಹುದು. ಈಗಾಗಲೇ ಕೂಲಿ ವೆಚ್ಚ, ರಸಗೊಬ್ಬರ ಮತ್ತು ಕೃಷಿ ನಿರ್ವಹಣಾ ವೆಚ್ಚಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ಅಡಿಕೆ ಬೆಳೆಗಾರರ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಅಡಿಕೆ ವ್ಯಾಪಾರ ಸುಗಮವಾಗಿ ನಡೆಯದಿದ್ದರೆ ಅದರ ಪರಿಣಾಮ ಕೇವಲ ರೈತರಿಗಷ್ಟೇ ಸೀಮಿತವಾಗದೆ, ಅಡಿಕೆ ಖರೀದಿ ಕೇಂದ್ರಗಳು, ಸಂಸ್ಕರಣಾ ಘಟಕಗಳು, ಸಾರಿಗೆ ವಲಯ ಹಾಗೂ ಸಾವಿರಾರು ಕಾರ್ಮಿಕರ ಉದ್ಯೋಗದ ಮೇಲೂ ಬೀಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್










