Uttara Kannada
Trending

100 ಕೋಟಿ ಲಸಿಕೆ ವಿತರಣೆ ಹಿನ್ನಲೆ: ಕೋವಿಡ್ ವಾರಿಯರ್ಸ್ಗೆ ಸನ್ಮಾನಿಸಿ ಗೌರವ: ಸಿಹಿ ಹಂಚಿ ಸಂಭ್ರಮ

ಹೊನ್ನಾವರ: ದೇಶದಲ್ಲಿ 100 ಕೋಟಿ ಲಸಿಕೆ ವಿತರಣೆ ಮಾಡಿದ ಮಹತ್ ಸಾಧನೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಿ, ಲಸಿಕೆ ವಿತರಣೆ ಕಾರ್ಯದಲ್ಲಿ ತೊಡಗಿದ ಆರೋಗ್ಯ ಕಾರ್ಯಕರ್ತರನ್ನು ಸನ್ಮಾನಿಸುವ ಮೂಲಕ ಸಂಭ್ರಮಾಚರಣಾ ಕಾರ್ಯಕ್ರಮ ಬಿಜೆಪಿ ಹೊನ್ನಾವರ ಮಂಡಲದ ವತಿಯಿಂದ ಪಟ್ಟಣದ ಲಸಿಕಾ ವಿತರಣೆ ಕೇಂದ್ರದಲ್ಲಿ ಇಂದು ಶನಿವಾರ ನಡೆಯಿತು. ವೈದ್ಯರು, ನರ್ಸ್ಗಳು, ಡಾಟಾ ಎಂಟ್ರಿ ಸಿಬ್ಬಂದಿಗಳು ಸೇರಿದಂತೆ ಲಸಿಕಾ ವಿತರಣೆಯಲ್ಲಿ ತೊಡಗಿಕೊಂಡವರಿಗೆ ಶಾಲು ಹೊದೆಸಿ ಸನ್ಮಾನಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಹೆಗಡೆ ಕರ್ಕಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆತ್ಮನಿರ್ಭರ ಭಾರತ ಯೋಜನೆಯಡಿ ಉಚಿತವಾಗಿ ಲಸಿಕೆಯನ್ನು ನೀಡಿದೆ. 100ಕೋಟಿ ಸಲಿಕೆ ವಿತರಿಸಿ ಸಾಧನೆ ಮಾಡುವ ಮೂಲಕ ಕೊರೊನಾ ವಾರಿಯರ್‌ಗಳು ಸರ್ಕಾರದ ಗೌರವವನ್ನು ಹೆಚ್ಚಿಸಿದ್ದಾರೆ. ಜನಸಮೂಹದ ನಡುವೆ ತಾಳ್ಮೆಯನ್ನು ಕಾದುಕೊಂಡು ಕೊರೋನಾ ವಾರಿಯರ್‌ಗಳು ಲಸಿಕೆಯನ್ನು ವಿತರಿಸಿದ್ದು ಅಭಿನಂದನೀಯರಾಗಿದ್ದಾರೆ.

ಬಿಜೆಪಿಯ ಅಧ್ಯಕ್ಷರಿಂದ ಹಿಡಿದು ಬೂತ್ ಮಟ್ಟದ ಕಾರ್ಯಕರ್ತರವರೆಗಿನ ಎಲ್ಲರೂ ಕೇಂದ್ರ ಸರ್ಕಾರದ ಈ ಮಹತ್ಕಾರ್ಯದಲ್ಲಿ ಹೆಗಲಿಗೆಹೆಗಲು ಕೊಟ್ಟು ಸಮಾಜಮುಖಿ ಕೆಲಸಮಾಡಿದರು. ಲಸಿಕೆಯನ್ನು ವಿತರಿಸಲು ಆರಂಭಿಸಿದಾಗ ವಿರೋಧ ಪಕ್ಷಗಳು ಊಹಾಪೋಹಗಳನ್ನು ಹಬ್ಬಸಿದರು. ಆದರೂ ಪ್ರಧಾನಿಯವರು ಹೆದರದೇ ನೂರು ಕೋಟಿ ಜನರಿಗೆ ಲಸಿಕೆ ನೀಡುವ ಮೂಲಕ ಜಗತ್ತಿನಲ್ಲಿ ದಾಖಲೆ ಮಾಡಿದ ದೇಶ ಭಾರತ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.

ಕೊರೊನಾ ವಾರಿಯರ್‌ಗಳ ಪರವಾಗಿ ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ ಕಿಣಿ ಮಾತನಾಡಿ ಲಸಿಕೆ ವಿತರಿಸುವುದು ನಮ್ಮ ಕರ್ತವ್ಯ. ಆದರೂ ಈ ಸಂದರ್ಭದಲ್ಲಿ ಕೊರೊನಾ ವಾರಿಯರ್‌ಗಳ ಸೇವೆಯನ್ನು ನೆನಪಿಸಿಕೊಳ್ಳುತ್ತಿರುವುದು ಅಭಿನಂದನೀಯ. ಆರಂಭದಲ್ಲಿ ಉಪಕರಣಗಳ ಕೊರತೆ ಇತ್ತು. ಆದರೆ ಸರ್ಕಾರ ಎಲ್ಲ ರೀತಿಯಲ್ಲಿ ವಿಶೇಷವಾಗಿ ಪಿ.ಎಂ. ಕೇರ್ಸ್ನಿಂದ ಸಾಕಷ್ಟು ಸೌಲಭ್ಯಗಳು ಬಂದಿವೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ, ರಾಜ್ಯ ಪರಿಷತ್ ಸದಸ್ಯ ಎಂ.ಜಿ. ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಉಮೇಶ ನಾಯ್ಕ, ಹೊನ್ನಾವರ ತಾಲೂಕಾಧ್ಯಕ್ಷ ರಾಜೇಶ ಭಂಡಾರಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ, ಮಾದ್ಯಮ ವಕ್ತಾರ ಎಮ್ ಎಸ್ ಹೆಗಡೆ ಕಣ್ಣಿ, ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ, ಮತ್ತಿತರರು ಉಪಸ್ತಿತರಿದ್ದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,

Back to top button