Big News
Trending

ರೋಹಿಣಿಯವರಿಗೆ ಕೇಂದ್ರ ಸಂಸ್ಕೃತಿ ಮಂತ್ರಾಲಯದ ಶಿಷ್ಯವೃತ್ತಿ: ರಾಗಲಕ್ಷಣ ಗೀತೆಗಳ ಕುರಿತು ತುಲನಾತ್ಮಕ ಅಧ್ಯಯನ

ಕುಮಟಾ: ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆಯ ಸದಸ್ಯೆ ರೋಹಿಣಿ ಭಟ್ಟ ಅವರಿಗೆ ಕೇಂದ್ರ ಸಂಸ್ಕೃತಿ ಮಂತ್ರಾಲಯದ ಶಿಷ್ಯವೇತನ ಸಿಕ್ಕಿದೆ. ಶತಮಾನದ ಹಿಂದೆ ಕಾಶೀನಾಥ ಶಾಸ್ತ್ರಿ ಅಪಾತುಲಸಿ ಅವರು ರಚಿಸಿದ ರಾಗಲಕ್ಷಣ ಶ್ಲೋಕ ಸಂಗ್ರಹವಾದ ರಾಗಕಲ್ಪದ್ರುಮಾಂಕುರ ಗ್ರಂಥ ಹಾಗೂ ಸಂಗೀತ ಕ್ರಾಂತಿಕಾರಿ ಪಂ. ವಿಷ್ಣು ನಾರಾಯಣ ಭಾತಖಂಡೆಯವರ ಕ್ರಮಿಕ ಪುಸ್ತಕ ಮಾಲಿಕೆಯಲ್ಲಿರುವ ರಾಗಲಕ್ಷಣ ಗೀತೆಗಳ ಕುರಿತು ತುಲನಾತ್ಮಕ ಅಧ್ಯಯನ ಮಾಡಿ, ಕತಗಾಲದ ಡಾ. ಕೆ ಗಣಪತಿ ಭಟ್ಟ ಹಾಗೂ ಪುಣೆಯ ಡಾ ಶೀತಲ ಮೋರೆಯವರ ಮಾರ್ಗದರ್ಶನದಲ್ಲಿ ಶೋಧಪ್ರಬಂಧ ರಚಿಸಲಿದ್ದಾರೆ.

ಯು.ಜಿ.ಸಿ ನೆಟ್ ಪರೀಕ್ಷೆಯಲ್ಲೂ ಉತ್ತೀರ್ಣರಾದ ರೋಹಿಣಿವರು ಗಾಯನ ಹಾಗೂ ವಾಯೋಲಿನ್ ವಾದನದಲ್ಲೂ ನಿಷ್ಣಾತರು. ಈಗಾಗಲೇ ಕನ್ನಡ-ಹಿಂದಿ ಭಾಷೆಗಳಲ್ಲಿ ರಾಗಕೋಶ, ಗಾನರಾಗ ರಸಾಯನ, ಪ್ರವಾಸ ಪಾರಾಯಣ ಸ್ತೋತ್ರ, ಸಂಗೀತ ಮಂಗಲಾಷ್ಟಕ, ನಾರದೀಯ ಸಂಗೀತ ಪುಸ್ತಕಗಳನ್ನು ಬರೆದಿದ್ದಾರೆ. ಸಂಗೀತದ ಸಂಪನ್ಮೂಲ ವ್ಯಕ್ತಿಗಳಾಗಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.

ಸದ್ಯ ಸಂಸ್ಕೃತ ವಾಙ್ಮಯದಲ್ಲಿ ರಾಗತತ್ವ ವಿವೇಚನೆ ಎಂಬ ಸಂಗೀತ ವಿಷಯದ ಕುರಿತು ಕವಲಕ್ಕಿಯ ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಕೇಶವಕಿರಣ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಕಾರ್ಯ ಕೈಗೊಂಡಿದ್ದಾರೆ. ಅವರ ಸಾಧನೆಗೆ ಕಲಾಶ್ರೀ ಸಂಸ್ಥೆಯ ಅಧ್ಯಕ್ಷ ಎಚ್.ಎನ್.ಅಂಬಿಗ ಅಭಿನಂದಿಸಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button