ತುಮಕೂರು ಹೆದ್ದಾರಿಯಲ್ಲಿ ಭೀಕರ ದುರಂತ: ಕಾರಿನಲ್ಲೇಭಾರೀ ಸ್ಫೋಟದೊಂದಿಗೆ ಯುವಕ ಸಾವು; ಯುವತಿ ಪಾರು : ಅಂಕೋಲಾ ಮೂಲದ ಯುವಕ ಯುವತಿಯರೇ ?

ಅಂಕೋಲಾ : ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ಸಮೀಪದ ಬೆಂಗಳೂರು -ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ( ಪಿ ಬಿ ರೋಡ್ ) ನಲ್ಲಿ ಶನಿವಾರ ಭೀಕರ ಘಟನೆ ಸಂಭವಿಸಿದೆ. ಕಾರಿನೊಳಗೆ ಪೆಟ್ರೋಲ್ ಬಾಂಬ್ ಇಲ್ಲವೇ ನಾಡ ಬಾಂಬ್ ಇಲ್ಲವೇ ಬೇರಾವುದೋ ರೀತಿಯಲ್ಲಿ ಸ್ಫೋಟಿಸಿಕೊಂಡ ಪರಿಣಾಮ ಯುವಕನೊಬ್ಬ ಬೆಂಕಿಗೆ ಆಹುತಿಯಾಗಿ ಮೃತಪಟ್ಟಿದ್ದು, ಕಾರಿನಲ್ಲಿದ್ದ ಯುವತಿ ಚಲಿಸುತ್ತಿದ್ದ ವಾಹನದಿಂದ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎನ್ನಲಾಗುತ್ತಿದೆ.
ಮೃತನನ್ನು ಅಂಕೋಲಾ ತಾಲೂಕು ಮೂಲದ ರಾಜನಗುಳಿಯ ನಾಗೇಂದ್ರ (30) ಎನ್ನಲಾಗುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾರಿನೊಳಗೆ ನಾಗೇಂದ್ರ ಹಾಗೂ ಯುವತಿಯ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಯುವಕ ಚಾಕುವಿನಿಂದ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಜೀವಭಯಗೊಂಡ ಯುವತಿ ಚಲಿಸುತ್ತಿದ್ದ ಕಾರಿನಿಂದ ಹೊರಗೆ ಜಿಗಿದು ಪಾರಾಗಿದ್ದಾಳೆ.
ಇದಾದ ಬಳಿಕ ಕಾರಿನೊಳಗೆ ಅದಾವುದೋ ಬಾಂಬ್ ಮಾದರಿ ಇಲ್ಲವೇ ಇತರೇ ರೀತಿ ಸ್ಫೋಟಗೊಂಡು ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗುತ್ತಿದೆ. ಬೆಂಕಿಯ ತೀವ್ರತೆಗೆ ನಾಗೇಂದ್ರ ಕಾರಿನಲ್ಲೇ ಸಜೀವ ದಹನಗೊಂಡು ಮೃತಪಟ್ಟಿದ್ದಾನೆ.
ಗಾಯಗೊಂಡ ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಅವಳೂ ಸಹ ಅಂಕೋಲಾ ಮೂಲದ ಸರಳೇಬೈಲ್ ಗ್ರಾಮದ ಮೂಲ ನಿವಾಸಿ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ತುಮಕೂರು ವ್ಯಾಪ್ತಿಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇದು ಪ್ರೇಮ ಸಂಬಂಧದ ಹಿನ್ನೆಲೆಯ ಘಟನೆವೇ ಅಥವಾ ಬೇರೆ ಕಾರಣವಿದೆಯೇ ಎಂಬ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಘಟನೆಯ ನಿಖರ ಕಾರಣ ಹಾಗೂ ಯುವಕ ಯುವತಿಯರ ಕುರಿತು ಮತ್ತಷ್ಟು ಹೆಚ್ಚಿನ ಹಾಗೂ ಅಧಿಕೃತ ಮಾಹಿತಿಗಳು ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ









