Uttara Kannada
Trending

ಪೊಲೀಸರ ಶ್ರಮಕ್ಕೆ ಸಿಕ್ಕಿತು ಫಲ. ಯಾಕೆ ನೋಡಿ?

ಕುಮಟಾ: ಲಾಕ್‍ಡೌನ್ ಜಾರಿಗೊಂಡ ಪ್ರಾರಂಭದ ದಿನಗಳಲ್ಲಿ ಸರಕಾರದ ನಿಯಮಗಳಿಗೆ, ಪೊಲೀಸರಿಗೆ ಖ್ಯಾರೆ ಅನ್ನದ ಸಾರ್ವಜನಿಕರು ಇದೀಗ ತಾವೇ ಸ್ವತಃ ಕರೋನಾ ಜಾಗೃತಿಯ ಕುರಿತು ಪೊಲೀಸ್ ಇಲಾಖೆಗೆ ಮಾಹಿತಿ ನೀಡುತ್ತಿರುವುದು ಅಚ್ಚರಿಯ ವಿಷಯವಾಗಿದೆ. ಹೌದು… ಲಾಕ್ ಡೌನ್ ಆರಂಭದಲ್ಲಿ ಬೇರೆ ಜಿಲ್ಲೆ ಅಥವಾ ರಾಜ್ಯಗಳಿಂದ ಬರುವ ತಮ್ಮ ತಮ್ಮ ಮಕ್ಕಳನ್ನು ಇಲಾಖೆಗೆ ತಿಳಿಯದಂತೆ ಗೌಪ್ಯವಾಗಿಡುತ್ತಿದ್ದ ಪಾಲಕರು ಈಗ ಪರಿಸ್ಥಿತಿ ಕೈ ಮೀರುವುದನ್ನು ಅರಿತಿದ್ದಾರೆ. ಹಾಗಾಗಿ ಹೊರರಾಜ್ಯಗಳಿಂದ ಬರುವವರಿಗೆ ಸ್ವತಃ ಮನೆಯವರೆ ನೇರವಾಗಿ ಪ್ರವೇಶಿಸಲು ಬಿಡುತ್ತಿಲ್ಲ. ಕಳೆದ 2,3 ದಿನಗಳಿಂದ ಪಾಲಕರೇ ಪೊಲೀಸ್ ಇಲಾಖೆಗೆ ತಮ್ಮ ಕುಟುಂಬದ ಸದಸ್ಯರು ಬರುವ ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಕುಮಟಾ ಪಿ.ಎಸ್.ಐ ಆನಂದ ಮೂರ್ತಿಯವರು ನಮ್ಮ ವಿಸ್ಮಯ ಟಿ.ವಿಗೆ ಮಾಹಿತಿ ನಿಡಿದ್ದಾರೆ. ಕುಮಟಾ ತಾಲೂಕಿನಲ್ಲಿ ಕರೋನಾ ಜಾಗೃತಿ ಯಶಸ್ವಿಯಾಗಿದೆಯೆಂದರೆ ಅದರಲ್ಲಿ ಪೊಲೀಸ್ ಇಲಾಖೆಯದ್ದೆ ಪ್ರಮುಖ ಪಾತ್ರ ಎನ್ನಬಹುದಾಗಿದೆ. ಸಿಪಿಐ ಪರಮೇಶ್ವರ ಗುನಗಾ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಆನಂದಮೂರ್ತಿಯವರ ಕಾರ್ಯವೈಖರಿ ಇಡೀ ತಾಲೂಕಿನ ಮೆಚ್ಚುಗೆಗೆ ಪಾತ್ರವಾಗಿದ್ದು, ಲಾಕ್ಡೌನ್ ಪ್ರಾರಂಭವಾದ ದಿನದಿಂದಲೂ ಹಗಲಿರುಳೆನ್ನದೆ ಕರೊನಾ ನಿಯಂತ್ರಣಕ್ಕೆ ಶ್ರಮಿಸಿರುವುದಕ್ಕೆ ಪೊಲೀಸ್ ಇಲಾಖೆಗೆ ಉತ್ತಮ ಫಲ ಸಿಕ್ಕಿದೆ ಎನ್ನಬಹುದಾಗಿದೆ.
ಕುಮಟಾದಲ್ಲಿ ಪಿ.ಎಸ್.ಐ ಆಗಿ ಕಾರ್ಯನಿರ್ವಹಿಸುತ್ತಿರುವ ಆನಂದಮೂರ್ತಿಯವರು ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಕರೋನಾ ಕಡಿವಾಣಕ್ಕಾಗಿ ದುಡಿಯುತ್ತಿದ್ದಾರೆ. ಪ್ರತಿದಿನ ಚೆಕ್‍ಪೋಸ್ಟ್‍ಗಳಲ್ಲಿ ಹದ್ದಿನ ಕಣ್ಣಿಟ್ಟು, ಜೋತೆಗೆ ಹೊರ ರಾಜ್ಯಗಳಿಂದ ಬಂದವರ ಮೇಲೆ ನಿಗಾ ಇಡುವ ಮೂಲಕ ಜನರಿಗೆ ಯಾವುದೆ ಸಮಸ್ಯೆ ಆಗದಂತೆ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಲಾಕ್‍ಡೌನ್ ಸಮಯದಲ್ಲಿ ಸಿಬ್ಬಂದಿಗಳಿಗೆ ಠಾಣೆಯಲ್ಲಿಯೆ ಊಟದ ವ್ಯವಸ್ಥೆ ಮಾಡಿ ಸಹಾಯ ಮಾಡುತ್ತಿದ್ದಾರೆ. ಒಬ್ಬ ದಕ್ಷ ಪೊಲೀಸ್ ಅಧಿಕಾರಿಗೆ ಇರಬೇಕಾದ ಎಲ್ಲಾ ಲಕ್ಷಣವನ್ನು ಆನಂದಮೂರ್ತಿಯವರು ಹೊಂದಿದ್ದಾರೆ ಎಂಬುದು ಕುಮಟಾ ಪೊಲಿಸ್ ಠಾಣಾ ಸಿಬ್ಬಂದಿಗಳ ಹಾಗೂ ಸಾರ್ವಜನಿಕ ವಲಯದ ಮಾತಾಗಿದೆ.
ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳಿಂದ ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೆ ಬಂದು ವಾಸಿಸುತ್ತಿದ್ದರೆ ಅಥವಾ ಹೋಮ್ ಕ್ವಾರಂಟೆನ್ಗೆ ಓಳಪಟ್ಟ ವ್ಯಕ್ತಿಗಳು ಹಾಗೂ ಅವರ ಕುಟುಂಬಸ್ಥರು ಕ್ವಾರಂಟೈನ್ ಕಾನೂನು ಉಲ್ಲಂಘನೆ ಮಾಡಿದರೆ ತಕ್ಷಣ ಸ್ಥಳೀಯರು ಕುಮಟಾ ಪೋಲಿಸ್ ಠಾಣೆಗೆ ದೂರವಾಣಿಯ ಮೂಲಕ ಸಂಪರ್ಕಿಸಿ, ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ಹೆಸರು ಹಾಗೂ ವಿಳಾಸವನ್ನು ಗೌಪ್ಯವಾಗಿಡಲಾಗುವುದು ಎಂದು ಪಿ.ಎಸ್.ಐ ಆನಂದ ಮೂರ್ತಿಯವರು ತಿಳಿಸಿದ್ದಾರೆ

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ.

Back to top button