ಎಲ್ಲರಿಗೂ ಗಂಟಲುದ್ರವ ಪರೀಕ್ಷೆ ಇಲ್ಲ- ಜಿಲ್ಲಾಧಿಕಾರಿ ಹರೀಶ್ ಕುಮಾರ್

ಕಾರವಾರ: ಕರೊನಾ ಸೋಂಕಿನ ಲಕ್ಷಣಗಳು ಮೆಲ್ನೋಟಕ್ಕೆ ಕಂಡು ಬಂದವರಿಗಷ್ಟೆ ಗಂಟಲು ದ್ರವ ಪರೀಕ್ಷಿಸುವಂತೆ ಸರಕಾರದ ಆದೇಶವಿದ್ದು, ಹೊರಗಿನಿಂದ ಬಂದವರಿಗೆಲ್ಲಾ ಸ್ವ್ಯಾಬ್ ಟೆಸ್ಟ್ ಗೆ ಕಳುಹಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಹರೀಶ ಕುಮಾರ್ ಕೆ ಹೇಳಿದರು. ಜಿಲ್ಲಾ ಪತ್ರಿಕಾ ಭವನಕ್ಕೆ ಭೇಟಿ ನೀಡಿದ್ದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಹೊರ ರಾಜ್ಯಗಳಿಂದ ಬಂದು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ ಎಲ್ಲರ ಗಂಟಲುದ್ರವ ಸಂಗ್ರಹಿಸುವ ಕೆಲಸ ಈ ಮೊದಲು ನಡೆಯುತ್ತಿತ್ತು. ಆದರೆ ಇತ್ತೀಚೆಗೆ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಕೊರೋನಾ ಸೋಂಕಿತನ ನಿಗದಿತ ಲಕ್ಷಣಗಳಲ್ಲಿ ಯಾವುದಾದರೂ ಒಂದು ಲಕ್ಷಣವಿದ್ದರೂ ಅಂತಹ ವ್ಯಕ್ತಿಯ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಇನ್ನುಮುಂದೆ ಕರೋನಾ ಮಾದರಿಯಲ್ಲಿ ಲಕ್ಷಣ ಕಂಡುಬಂದರೆ ಮಾತ್ರ ಅಂತವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆದರೆ ಸೋಂಕಿನ ಲಕ್ಷಣಗಳಿದ್ದರೂ ನೇರವಾಗಿ ಹೇಳಿಕೊಳ್ಳದೆ ಮಾಹಿತಿ ಮುಚ್ಚಿಡುವ ಸಂಶಯವಿದೆ. ಈ ಬಗ್ಗೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಲಿದ್ದು, ಸೋಂಕಿನ ಲಕ್ಷಣಗಳೇನಾದರೂ ಕಂಡು ಬಂದಲ್ಲಿ ಅಂತಹವರು ದೈರ್ಯವಾಗಿ ಆರೋಗ್ಯ ತಪಾಸಣೆಗೆ ಒಳಪಡುವಂತೆ ಜಾಗೃತಿ ಮೂಡಿಸಲಾಗುತ್ತದೆ. ಸೋಂಕು ಹರಡದಂತೆ ಈವರೆಗೆ ಜಿಲ್ಲೆಯಲ್ಲಿ ಕ್ರಮಗಳಾಗಿದೆ. ಮುಂದೆಯೂ ಇದೆ ಮಾದರಿಯಲ್ಲಿ ಪರಿಸ್ಥಿತಿ ನಿಭಾಯಿಸಲು ಸಿದ್ದರಿದ್ದು, ಸಾರ್ವಜನಿಕರು ಈ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಹೇಳಿದರು.

ಬ್ಯೂರೋ ರಿಪೋರ್ಟ್ ವಿನ್ಯೂಸ್

Exit mobile version