Important
Trending

ಪಲ್ಟಿಯಾದ ಕಾರು: ಮಗನನ್ನು ಏರ್ ಪೋರ್ಟ್ ಗೆ ಬಿಡಲು ಹೋದ ತಂದೆ ದುರ್ಮರಣ : ನಾಲ್ವರಿಗೆ ಗಂಭೀರ ಗಾಯ

ಐಆರ್ ಬಿ ಅವೈಜ್ಞಾನಿಕ ಕಾಮಗಾರಿಯಿಂದ ಹೆಚ್ಚುತ್ತಿರುವ ಅಪಘಾತ ?

ಮಗನನ್ನು ವಿದೇಶಕ್ಕೆ ಕಳುಹಿಸುವ ಕನಸನ್ನು ಹೊತ್ತ ತಂದೆ ಮಗನನ್ನು ಏರ್ ಪೋರ್ಟ್ ಗೆ ಬಿಡಲು ಕಾರಿನಲ್ಲಿ‌ ಹೊರಟಿದ್ದರು. ಆದರೆ , ಜವರಾಯ ದಾರಿ ಮಧ್ಯೆ ಹೊಂಚುಹಾಕಿ ಕೂತಿದ್ದ. ವಿಧಿಯಾಟವೇ ಬೇರೆಯದಾಗಿತ್ತು.

ಅಂಕೋಲಾ: ರಾ.ಹೆ 66ರ ಬಾಳೆಗುಳಿ – ಅಲಗೇರಿ ಕ್ರಾಸ್ ಹತ್ತಿರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರ ಪ್ರಯಾಣಿಕನೋರ್ವ ಸ್ಥಳದಲ್ಲೇ ಮೃತಪಟ್ಟು, ಕಾರಿನಲ್ಲಿದ್ದ ಉಳಿದ ನಾಲ್ವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಹೊನ್ನಾವರ ಮೂಲದ ಇವರು ಗೋವಾ ಏರಪೋರ್ಟಗೆ ತೆರಳುತ್ತಿದ್ದ ವೇಳೆ, ದಾರಿಮಧ್ಯೆ ಅಂಕೋಲಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ.

ಮಳೆ ಅಥವಾ ಇತರೆ ಕಾರಣದಿಂದ ಹೆದ್ದಾರಿಯಲ್ಲಿ ನೀರು ನಿಂತಿದ್ದು ಅರಿವಿಗೆ ಬಾರದೇ , ಕಾರ್ ಚಾಲಕ ಒಮ್ಮೇಲೆ ಬ್ರೇಕ್ ಒತ್ತಿರುವ ಸಾಧ್ಯತೆ ಇದ್ದು, ಚಾಲಕನ ನಿಯಂತ್ರಣ ತಪ್ಪಿದ ಕಾರ್ ಹೆದ್ದಾರಿ ಅಂಚಿಗೆ ಪಲ್ಟಿಯಾಗಿ ತಗ್ಗು (ಕಂದಕ ) ಪ್ರದೇಶದಲ್ಲಿ ಬಿದ್ದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಹಿಂದೆಯೂ ಇದೇ ಸ್ಥಳದಲ್ಲಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಗಳು ಸಾಗುತ್ತಿದ್ದ ಕಾರ್ ಪಲ್ಪಿಯಾಗಿ ನಡೆದ ದುರಂತ ಘಟನೆ, ಈ ಸ್ಥಳದ ಅಕ್ಕ ಪಕ್ಕ ನಡೆದ ಇತರೆ 1-2 ಪ್ರತ್ಯೇಕ ರಸ್ತೆ ಅಪಘಾತಗಳನ್ನು ಉದಾಹರಿಸಿ ಆಕ್ರೋಶ ವ್ಯಕ್ತಪಡಿಸಿರುವ ಕೆಲ ಸ್ಥಳೀಯರು , ಇವಕ್ಕೆಲ್ಲ ಆಯ್ ಆರ್ ಬಿ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಅಸಮಾಧಾನ ಹೊರ ಹಾಕಿದಂತಿದೆ.

ಸಿಪಿಐ ಸಂತೋಷ ಶೆಟ್ಟಿ, ಪಿ ಎಸೈ ಪ್ರವೀಣ ಕುಮಾರ್ ,ERSS 112 ವಾಹನ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸ್ಥಳೀಯರ ಸಹಕಾರದಲ್ಲಿ ಐ.ಆರ್ ಬಿ ಅಂಬುಲೆನ್ಸ್ ಮೂಲಕ ಗಾಯಾಳುಗಳನ್ನು ತಾಲೂಕಾ ಆಸ್ಪತ್ರೆಗೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತದ ರಭಸಕ್ಕೆ ಕಾರ್ ಜಖಂ ಗೊಂಡಿದ್ದು,ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.ಕಾರನಲ್ಲಿದ್ದ ಹೊನ್ನಾವರ ಗುಂಡಬಾಳ ಮೂಲದ ಸಿರಿಲ್ ಫರ್ನಾಂಡಿಸ್ ಮೃತ ದುರ್ದೈವಿ ಎನ್ನಲಾಗಿದ್ದು, ಆತನ ಮಡದಿ ಹಾಗೂ ಮಗ, ಓರ್ವ ಸಂಬಂಧಿ ಹಾಗೂ ಕಾಸರಗೋಡ ಮೂಲದ ಮೇಸ್ತ ಎನ್ನುವವರಿಗೆ ಗಾಯಗಳಾಗಿದೆ.

ತನ್ನ ಮಗ ಜಾಯ್ ವಿದೇಶಕ್ಕೆ ತೆರಳುವ ಸಲುವಾಗಿ ಆತನನ್ನು ಗೋವಾ ಏರ್ ಪೋರ್ಟಗೆ ಬಿಟ್ಟು ಬರಲು ಹೊರಟಿದ್ದ ತಂದೆ, ತಾನೇ ಎಲ್ಲರನ್ನೂ ಬಿಟ್ಟು ಬಾರದ ಲೋಕಕ್ಕೆ ಮರಳಿರುವುದು ದುರ್ವಿಧಿಯೇ ಸರಿ.

ಸಾಮಾಜಿಕ ಕಾರ್ಯಕರ್ತರಾದ ವಿಜಯ ಕುಮಾರ ನಾಯ್ಕ ಕನಸಿಗದ್ದೆ, ಶಿವಾ ನಾಯ್ಕ ಅವರ್ಸಾ, ಮಂಜುನಾಥ ಬಲಿಯಾ ನಾಯ್ಕ ಹಟ್ಟಿಕೇರಿ ಮತ್ತಿತರರು ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.

ಪೋಲೀಸ್ ಸಿಬ್ಬಂದಿಗಳು,ಟ್ರಾಫಿಕ್ ಜಾಮ್ ಆಗದಂತೆ ಸುಗಮ ಸಂಚಾರಕ್ಕೆ ಕರ್ತವ್ಯ ನಿರ್ವಹಿಸಿದರು. ಪೊಲೀಸ್ ತನಿಖೆಯಿಂದ ಹೆಚ್ಚಿನ ವಿವರಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button