Important
Trending

ಮುಳ್ಳುಹಂದಿಯನ್ನು ಬೇಟೆಯಾಡಿ ಬೈಕ್ ನಲ್ಲಿ ಸಾಗಾಟ: ಇಬ್ಬರ ಬಂಧನ

ಹೊನ್ನಾವರ: ಅರಣ್ಯಾಧಿಕಾರಿಗಳ ತಂಡವು ಕಾರ್ಯಾಚರಣೆ ನಡೆಸಿ, ಮುಳ್ಳು ಹಂದಿಯ ಮೃತದೇಹವನ್ನು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಓರ್ವ ಆರೋಪಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ದೀವಳ್ಳಿಯ ಸಂಜಯ ದಿನ್ನಿ ನೊರೊನಾ (25) ಹಾಗೂ ಪ್ರಕಾಶ ಪ್ರಾನ್ಸಿಸ್ ರೊಡ್ರಗಿಸ್, (39) ಎಂಬುವವರು ಅಕ್ರಮವಾಗಿ ಮುಳ್ಳುಹಂದಿಯನ್ನು ಬೇಟೆಯಾಡಿ ಬೈಕ್ ನಲ್ಲಿ ಸಾಗಿಸುತ್ತಿರುವಾಗ ಕತಗಾಲ ವಲಯದ ಹರೀಟಾ ಗ್ರಾಮದ ಆನೆಗುಂದಿ ಕ್ರಾಸ್ ಹತ್ತಿರ ಇಬ್ಬರು ಆರೋಪಿಗಳನ್ನು ಬೈಕ್ ಹಾಗೂ ಮುಳ್ಳು ಹಂದಿಯ ಮೃತದೇಹದೊಂದಿಗೆ ವಶಪಡಿಸಿಕೊಳ್ಳಲಾಗಿದೆ.

ದಸ್ತಗಿರಿಯಾದ ಆರೋಪಿಗಳನ್ನು ನ್ಯಾಯಾಧೀಶರ ಸಮಕ್ಷಮ ಹಾಜರುಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಬಿ. ಎನ್. ಬಂಕಾಪುರ, ವಸಂತಕುಮಾರ ಗೌಡ, ಹರಿಶ್ಚಂದ್ರ ಮುಕುಂದ ಪಟಗಾರ, ಹಾಗೂ ಗಸ್ತು ಅರಣ್ಯ ಪಾಲಕರಾದ ಮಹೇಶ ಹವಳೆಮ್ಮನವರ, ದಿನೇಶ ಪಡುವಣಿ, ಗಣೇಶ ನಾಯಕ , ಸದಾಶಿವ ಪುರಾಣಿಕ ಇತರರು ಇದ್ದರು. ಸದ್ರಿ ವನ್ಯಜೀವಿ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button